Wednesday 25 October 2017

"ಗೌರಿಯ ಮಕ್ಕಳು"

ಉತ್ತರಕರ್ನಾಟಕದ ಹಳ್ಳಿಗಳಲ್ಲಿ ಆಚರಿಸಲ್ಪಡುವ ಹಬ್ಬಗಳ ಸೊಬಗೇ ವಿಸ್ಮಯಗೊಳಿಸುವಂಥದು!
ಇಲ್ಲಿನ ಎಲ್ಲ ಬದುಕುಗಳ ಪ್ರತೀ ಕದಲಿಕೆಯೂ ಮಣ್ಣಿನ ಜೊತೆಗೊಂದು ಸಂಕೀರ್ಣವಾದ ಬಂಧವೊಂದನ್ನು ಬೆಸೆದಿರುತ್ತದೆ! ಇಲ್ಲಿನ ಎತ್ತು,ಆಕಳು,ಎಮ್ಮೆ,ಆಡು,ಹೊಲದ ಬದು,ಬದುವಿನ ಮೇಲೆ ಬೆಳೆದ ಟಂಗಟಿಯ ಗಿಡ...ಹೀಗೆ ಯಾವುದೂ ಇಲ್ಲಿ ಅಮುಖ್ಯವೆನಿಸುವುದೇ ಇಲ್ಲ! ಎಲ್ಲವೂ ಹಳ್ಳಿಗರ ಬದುಕಿನ ಅವಿಭಾಜ್ಯ ಅಂಶಗಳಾಗಿ,ಅವರ ಬದುಕು,ಸಂಸ್ಕೃತಿಯೊಂದಿಗೇ ಸಾಗುತ್ತಿರುತ್ತವೆ.

ಇಲ್ಲಿ ಸ್ತ್ರೀ ಎಂಬ ಕಾರಣಕ್ಕೆ ಅವಳ ಹಕ್ಕಿನ ನಿರಾಕರಣೆಯಾಗದು.ಬದುಕಿನ ಸುಖಕ್ಕೆ ಬೇಕಿರುವುದು ಸಮಾನತೆಗಾಗಿನ ಬಡಿದಾಟವಲ್ಲ,ಸೌಹಾರ್ದದೆಡೆಗಿನ ಸಾಮರಸ್ಯ ಎಂಬ ಜೀವನಮೌಲ್ಯ ಸಾರುವಂತಹ ಸಂಸ್ಕೃತಿ ಹಳ್ಳಿಗಳದ್ದು.!

ಅದಕ್ಕೆ "ಗೌರೀ ಹಬ್ಬ" ದ ಆಚರಣೆಯನ್ನು ಉದಾಹರಿಸಬಹುದು.ಇದು ಹಿರೇಕುಂಬಳಗುಂಟೆಯಂತಹ ಹಲವು ಹಳ್ಳಿಗಳಿಗೇ ದೊಡ್ಡಹಬ್ಬವೂ ಹೌದು.ಕೇವಲ ಮಹಿಳೆಯರ ಅದರಲ್ಲೂ ಅವಿವಾಹಿತ ಹುಡುಗಿಯರು ಸಂಭ್ರಮಿಸಿ ಸುಖಿಸುವ ಹಬ್ಬ!

ದಸರಾ ಅಮವಾಸ್ಯೆಯ ನಂತರದ ಸೀಗೆ ಹುಣ್ಣಿಮೆಗೆ "ಸಣ್ಣ ಗೌರೀ ಹಬ್ಬ" ಆಚರಿಸಿದರೆ,ದೀಪಾವಳಿ ಅಮವಾಸ್ಯೆಯ ನಂತರ ಬರುವ ಹುಣ್ಣಿಮೆಯೇ "ಗೌರಿ ಹಬ್ಬ" ದ ಆಚರಣೆಗೆ ಮೀಸಲಾಗಿರುತ್ತದೆ.ಬಹುತೇಕ ಎರಡೂ "ಗೌರಿ ಹಬ್ಬ" ಗಳೂ ಒಂದೇ ರೀತಿಯವಾದರೂ ದೊಡ್ಡ ಗೌರಿ ಹಬ್ಬವೇ ಸಾಂಸ್ಕೃತಿಕವಾಗಿ ಪ್ರಾಮುಖ್ಯತೆ ಪಡೆದಿದೆ.

ಹುಣ್ಣಿಮೆ ಇನ್ನೂ ಒಂದು ವಾರವಿರುವಾಗಲೇ ಊರ ಹೊರಗಿನ ಫಲವತ್ತಾದ ಮಣ್ಣನ್ನು ತರುವ ಮೂಲಕ ಗೌರಿಹಬ್ಬ ಚಾಲನೆ ಪಡೆದುಕೊಳ್ಳುತ್ತದೆ.
ಊರಿನ ಅವಿವಾಹಿತ ಹೆಂಗಳೆಯರೆಲ್ಲ ಕೂಡಿ ಭೂಮಿಯನ್ನು ಪೂಜಿಸಿ,ಹುರುಳಿ ಬೇಳೆ-ಬೆಲ್ಲದ ಎಡೆ ಅರ್ಪಿಸಿ ಬಟ್ಟಲುಗಳಲ್ಲಿ ಮಣ್ಣು ತುಂಬಿ ಎಲ್ಲರೂ ಒಟ್ಟಾಗಿ ಹಾಡುತ್ತ ಹೊತ್ತು ತರುತ್ತಾರೆ.

" ಕುತನಿ ಜರಿಯ ಕುಬುಸ ತೊಟ್ಟು
ಕುಂಕುಂಬೊಟ್ಟು ಹಣೆ ಮೇಲಿಟ್ಟು
ವಾಲೆ ಕಪ್ಪು ಕಿವಿಯಲಿಟ್ಟು
ಒಲುಮೆಯಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||

ಸಾಸ್ವಿ ಬಣ್ಣದ ಸೀರೆಯುಟ್ಟು
ಮುತ್ತಿನ ದಂಡೆ ಜಡೆಯಲಿಟ್ಟು
ಬೇಳೆ-ಬೆಲ್ಲ ತೆಗೆದುಕೊಂಡು
ಹರುಷದಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||

ಕಂಚಿನ ಕಳಶ ತುಂಬಿ ಇಟ್ಟು
ಗೆಳತಿಯರು ನಾವು ಐವಾರು
ಗೌರಿ ನಿನ್ನ ಮಣ್ಣ ತುಂಬಿ
ನಿರುತದಿಂದ ಕರೆಯಬಂದೆ
ಸಣ್ಣರಾಯ ನಿನ್ನ ಮಗಳ
ಬಣ್ಣದಿಂದ ಕರೆಯಬಂದೆ
ಮನೆಗೆ ಬಾರವ್ವ ಗೌರಿ ಮನೆಗೆ ಬಾರವ್ವಾ||"

 ಹೀಗೆ ತಂದ ಮಣ್ಣನ್ನು ಗ್ರಾಮದ ದೇವಸ್ಥಾನದ ಮೂಲೆಯಲ್ಲಿ ಚಿಕ್ಕ ಗುಡ್ಡೆಹಾಕುತ್ತಾರೆ.
ಇದನ್ನು "ಗೌರಿಯನ್ನು ಕರೆತರುವುದು" ಎನ್ನಲಾಗುತ್ತದೆ.ಈ ಮಣ್ಣಗುಡ್ಡೆಗೆ ಪ್ರತಿ ದಿನವೂ ಹೂವಿನ ಆರತಿ ಬೆಳಗುತ್ತಾರೆ.
ತರಕಾರಿಗಳನ್ನು ಅಡ್ಡಡ್ಡ ಕೊಯ್ದು ಹೋಳುಗಳ ಮೇಲೆ ಬತ್ತಿಗಳನ್ನಿಟ್ಟು,ಜೊತೆಗೆ ಟಂಗಟಿಯ ಹೂಗಳನ್ನೋ,ಗುರೆಳ್ಳು,ಕೋಲಣ್ಣೆ,ಸೂರ್ಯಕಾಂತಿ ಹೀಗೆ ವೈವಿದ್ಯಮಯ ಹೂಗಳ ಜೊತೆ ಆರತಿ ಬೆಳಗುವುದನ್ನು ನೋಡುವುದೇ ಚಂದ!

ಹೊಲಗಳಲ್ಲಿನ ಬೆಳೆಗಳೆಲ್ಲ ಹೂವಾಡುವ,ಕಾಳುಗಟ್ಟುವ ಕಾಲವಾದ್ದರಿಂದ,ಫಲ ಕೊಟ್ಟ ಭೂದೇವಿ(ಮಣ್ಣು) ಯನ್ನೂ ಗೌರಿಯ ರೂಪದಲ್ಲಿ ಪೂಜಿಸಿ ಕೃತಜ್ಞತೆಯರ್ಪಿಸುವ ಅರ್ಥಪೂರ್ಣ ಆಚರಣೆ ಇದು!
ಮೂರು ದಿನ ಮಣ್ಣುಗೌರಿಗೆ ಆರತಿ ಬೆಳಗಿದ ನಂತರ ದೇಗುಲದ ಒಳಗಿನ ಗೌರಮ್ಮನನ್ನು(ಮರದ ವಿಗ್ರಹ)ಹೊರಗೆ ತಂದು ಅದಕ್ಕೂ ಸೀರೆಯುಡಿಸಿ ಆರತಿ ಬೆಳಗುತ್ತಾರೆ.

ಐದು ದಿನಗಳ ಆರತಿ ಬೆಳಗುವುದು ಮುಗಿದ ಮರುದಿನ ಹೆಣ್ಣುಮಕ್ಕಳೆಲ್ಲಾ "ಗೌರಿ ಹುಡುಗಿ" ಯರಾಗಿ ನಲಿದಾಡುವ ದಿನ.
ಪುಟ್ಟ ಪುಟ್ಟ ಹೆಂಗೂಸುಗಳಿಂದ ಹಿಡಿದು,ಪ್ರಾಯಕ್ಕೆ ಬಂದ ತರುಣಿಯ ತನಕ ಎಲ್ಲರೂ ಸೀರೆಯುಟ್ಟು ಅಲಂಕರಿಸಿಕೊಂಡು ತಂಡ ತಂಡಗಳಾಗಿ ವಿವಿಧ ಆಟಗಳಾಡುತ್ತ ದಿನವಿಡೀ ಸಂತೋಷದಿಂದ ಕಳೆಯುತ್ತಾರೆ.
ಅಡಕೆಲೆಯ ಸಂಚಿಗಳನ್ನು ಸೊಂಟಗಳಲ್ಲಿ ಸಿಕ್ಕಿಸಿಕೊಂಡು ವೈಯಾರದಿಂದ ನಡೆಯುವ ಆ ಗೌರಿಮಕ್ಕಳ ನೋಟವೇ ಒಂದು ಚಂದ!

" ಒಂದು ಸೇರು ಬೆಲ್ಲಾವ ತಂದು
ಘಮಾ ಘಮಾ ಹುಗ್ಗಿಯ ಮಾಡಿ|
ರಾಯರಾಡೋದು ಹಾದಿಬೀದ್ಯಾಗ
ನಾವಾಡೋದು ಗೌರಿ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಎರಡು ಸೇರು ಅಕ್ಕಿಯ ತಂದು
ಎರಡು ಬುಟ್ಟಿ ಕಜ್ಜಾಯ ಮಾಡಿ|
ಶೆಟ್ಟರಾಡೋದು ಪಟ್ಟಣಸಾಲ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಮೂರು ಸೇರು ತೊಗರಿ ತಂದು
ಮೂರು ಪರಾತ ಹೋಳಿಗೆ ಮಾಡಿ|
ಮಕ್ಕಳಾಡೋದು ಮಂಗಳಾರಪೇಟ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ನಾಕು ಸೇರು ಕಡಲೆ ತಂದು
ಒಪ್ಪಾಗಿ ಮಾಡಿ ಉಂಡೀಕಡುಬು|
ಕರಣೀಕರಾಡೋದು ಕೋಟೆಬೀದ್ಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||

ಐದು ಸೇರು ಹಲಸಂದಿ ತಂದು
ಐದೂ ತರಾದ ಹಪ್ಪಾಳ ಮಾಡಿ
ಉಳ್ಳವರಾಡೋದು ಹಾಲಿನ ಹೊಳಿಯಾಗ
ನಾವಾಡೋದು ಗೌರೀ ಹುಣ್ಣಿಮ್ಯಾಗ|
ನಾವಾಡೋದು ಗೌರಿ ಹುಣ್ಣಿಮ್ಯಾಗ ಗೌರಿಯಾಡೊದು
ಹೂವಿನ ಬನದಾಗ|
ಕೋಲ ಗೌರೀ ಕೋಲ
ಕಂಚೀನ ಗೌರೀ ಕೋಲ||"

ಈ ಮೂರೂ ದಿನಗಳ "ಗೌರಿಯಾಟ" ದಲ್ಲಿ ಹೊಲಗಳಲ್ಲಿ ಏನೇ ಕೆಲಸಗಳಿದ್ದರೂ ಅವರನ್ನು ಮನೆಯವರು ಕೆಲಸಗಳಿಗೆ ಕರೆಯುವ ಹಾಗಿಲ್ಲ.ಅಕ್ಷರಶಃ ಅವರು ಹಕ್ಕಿಗಳು ಅವಾಗ!
ಆಟವಾಡಿ ದಣಿದು ಸಾಯಂಕಾಲವಾದೊಡನೆ ಅವರಿಗಾಗಿ ಮನೆಗಳಲ್ಲಿ ವಿಶೇಷ ತಿಂಡಿಗಳ ವ್ಯವಸ್ಥೆಯಾಗುತ್ತದೆ.ಎಲ್ಲರೂ ಒಟ್ಟಾಗಿ ಊರಿನ ಒಂದು ಕಡೆ ತಿಂಡಿ ತಿಂದು ತಾಂಬೂಲ ಮೆಲ್ಲುತ್ತಾ
ಊರಿನ ಪೋಲಿಹುಡುಗರ ಕಡೆಗೊಂದು ಛಳ್ಳನೆ ಕುಡಿನೋಟ ಬೀರುವ,ಪಿಚಕ್ಕನೆ ಎಲೆಯಡಕೆ ರಸ ಹಾರಿಸುವ ಅವರ ಗತ್ತೇ ಸೊಗಸು.

ಇದು ಹೆಣ್ಣು ನೋಡುವರಿಗೆ ಸೂಕ್ತ ಸಂದರ್ಭವೂ ಆಗಿರುತ್ತದೆ.ಪರಸ್ಪರ ಸಂಬಂಧಗಳು ಕೂಡಲೂ ವೇದಿಕೆಯೂ ಆಗುತ್ತದೆ.ಒಂದು ರೀತಿಯಲ್ಲಿ ಗೌರಿಹಬ್ಬ "ವಧುಗಳ ಸಮಾವೇಷ" ದಂತೆಯೂ ಕಾಣುತ್ತದೆ.

ಕೊನೆಯ ದಿನ ಗೌರಿಯನ್ನು ಗಂಡನ ಮನೆಗೆ ಕಳಿಸಿಕೊಡುವ ದಿನ.ಅವತ್ತು ಮಾತ್ರ ಗೌರಿಹುಡುಗಿಯರ ಜೊತೆ ಊರಿನ ಇತರೆ ಮುತ್ತೈದೆಯರೂ ಬಂದು ಗೌರಿ ಮೂರ್ತಿಗೆ ಹೊಸ ಸೀರೆಯುಡಿಸಿ ಉಡಿ ತುಂಬಿ ಅಕ್ಷತೆ ಹಾಕಿ ಪದಗಳನ್ನು ಹಾಡಿ ಆಕೆಯ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ.

"ಮಾಮರದ ತಂಪಿಗೆ ಕೂತಿರುವ ಗಿಳಿಗಳೇ
ಚದುರಂಗಿ ಮಾತ ನಿಲ್ಲಿಸೀ
ಚದುರಂಗಿನೇ ಮಾತ ನಿಲ್ಲಿಸಿ ಗಿಳಿಗಳೇ
ಬನ್ನಿರವ್ವ ಗೌರಿಯ ಕಳಿಸಾಕೆ ||ಪ||

ಊರ ಮುಂದೀನ ತೋಟ ತೆಂಗಿನಡಕೆಯ ತೋಟ
ನಡುವಿರುವ ದೊಡ್ಡಮಾವಿನಾ
ನಡುವಿರುವ ಈ ದೊಡ್ಡ ಮಾವಿನ ಮರದ ತಂಪ
ನೆರಳೇ ಬಾ ಗೌರೀಯ ಕಳಿಸಾಕೆ ||೧||

ನೀರಾಗೆ ಹುಟ್ಟೊದೆ ನೀರಾಗೆ ಬೆಳೆಯೊದೆ
ನೆಲದಾಗೆ ಗುಟುವಾ ಕೊರೆಯೋದೇ
ನೆಲದಾಗೆನೇ ಗುಟುವ ಕೊರೆಯೋ ನಾಗರಬಳ್ಳಿ
ನೀನೂ ಬಾ ಗೌರೀಯ ಕಳಿಸಾಕೆ ||೨|| 

ಚಪ್ಪರದ ಮಲ್ಲಿಗೆ ಕೆಸರೋಳು ಕಮಲದ ಹೂವೆ
ಮರದಾಗರಳುವಾ ಸಂಪಿಗೇ
ಮರದಾಗೆ ಅರಳುವಾ ಸಂಪಿಗೆ ಒಳಗಿರುವ
ಪರಿಮಳ ಬಾ ಗೌರಿಯ ಕಳಿಸಾಕೆ ||೩||

ಬಾಯ್ತುಂಬಿ ಹರಸುವೆ ನನ್ನ ಗೆಳತೀಯರ
ತಾಯ್ತಂದೆ ಅಣ್ಣತಮ್ಮಾರ
ತಾಯಿ ತಂದೇಯರ ಅಣ್ಣ ತಮ್ಮಂದೀರ
ನೀವು ಬನ್ನಿ ಗೌರಿ ಕಳಿಸಾಕೆ ||೪||

- ಎಂತಹ ಭಾವ ಪೂರ್ವಕ ವಿದಾಯ ನೋಡಿ ಇದು.!
ಈ ದಿನ ಮಾತ್ರ ಗೌರಿಯ ಮೂರ್ತಿಗೆ ಸಕ್ಕರೆಯ ಬೊಂಬೆಗಳನ್ನು ಆರತಿ ತಟ್ಟೆಯಲ್ಲಿಟ್ಟು ಸಕ್ಕರೆಯ ಆರತಿ ಎಂಬ ವಿಶಿಷ್ಟ ಆರತಿ ಬೆಳಗಲಾಗುತ್ತದೆ.

ಒಂದು ಸೇರಕ್ಕಿ ತಾರಲೇ ಗೌರವ್ವಾ
ಒಂದೆ ಮಂಡಲ ಬರೀಲೇ
ಆರದಕ್ಕಿ ನೀಲಿಬಣ್ಣದೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಎರಡು ಸೇರಕ್ಕಿ ತಾರಲೇ ಗೌರವ್ವ
ಎರಡೆ ಮಂಡಲ ಬರೀಲೇ
ಕಾರೆಳ್ಳು ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ||

ಮೂರು ಸೇರಕ್ಕಿ ತಾರಲೇ ಗೌರವ್ವ
ಮೂರು ಮಂಡಲ ಬರೀಲೇ
ಕಣಗೀಲೆ ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ನಾಕು ಸೇರಕ್ಕಿ ತಾರಲೇ ಗೌರವ್ವ
ನಾಕು ಮಂಡಲ ಬರೀಲೇ
ಹಳದಿ ಚಂಡೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಐದು ಸೇರಕ್ಕಿ ತಾರಲೇ ಗೌರವ್ವ
ಐದು ಮಂಡಲ ಬರೀಲೇ
ಮಲ್ಲೀಗೆ ಹೂವ ತಾರಲೇ ಗೌರವ್ವ
ಹುಣ್ಣಿಮೆ ಎಡೆ ಕೊಡಲೇ
ಗೌರವ್ವ ಹಣ್ಣಿಮೆ ಎಡೆ ಕೊಡಲೇ||

ಗೌರವ್ವ ಹಣ್ಣಿಮೆ ಎಡೆ ಕೊಡಲೇ 

ಗೌರಿಯನ್ನು ಗಂಡನ ಮನೆಗೆ ಕಳುಹಿಸಿದ ನಂತರದ ಹುಣ್ಣಿಮೆಯ ದಿನದಂದು ಎಲ್ಲರ ಮನೆಗಳಲ್ಲೂ ಎಳ್ಳು ಹಚ್ಚಿದ ಸಜ್ಜೆಯ ರೊಟ್ಟಿ ಹಾಗೂ ಮತ್ತಿತರ ತಿಂಡಿಗಳನ್ನು ಮಾಡಿ "ಕೊಂತಿ ಬಸಪ್ಪ" ಎಂಬ ವಿಶಿಷ್ಟ ಆಚರಣೆಯನ್ನು ಮಾಡಲಾಗುತ್ತದೆ.
ಮನೆಯಂಗಳವನ್ನು ಸಾರಿಸಿ,ಸುಣ್ಣದಿಂದ ಚಂದ್ರನ ಚಿತ್ರವನ್ನು ಬರೆದು,ಅದಕ್ಕೆ ಏಣಿಯ ಚಿತ್ರವನ್ನೂ ಬರೆಯಲಾಗುತ್ತದೆ.ಆ ಚಿತ್ರವನ್ನು ಪೂಜಿಸಿ,ಎಲ್ಲರೂ ಮನೆಯ ಮಾಳಿಗೆಗಳನ್ನು ಹತ್ತಿ,ಅಲ್ಲಿಯೇ ಒಟ್ಟಾಗಿ ಊಟ ಮಾಡುತ್ತಾರೆ.
ಅಂದಿಗೆ ಗೌರಿ ಹಬ್ಬ ಕೊನೆಗೊಳ್ಳುತ್ತದೆ.

ಈ ಗೌರಿ ಹಳ್ಳಿಯ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ,ಸಂಸ್ಕೃತಿಯೊಂದರ ರಾಯಭಾರಿಯಾಗಿ ಸಾವಿರ ಸಾವಿರ ಬದುಕುಗಳ ಅಂತರ್ಧ್ವನಿಯಾಗಿ ನಮಗೆ ಗೋಚರಿಸುತ್ತಾಳೆ.
ಆಧುನಿಕ ಕಾಲದ ಥಳುಕುಬಳುಕಿನ ಕೃತಕತೆಯ ನಡುವೆಯೂ ಒಂದು "ಅಸ್ಮಿತೆ" ಯಂತೆ ತೋರುತ್ತಾಳೆ.
ಕೈಲಾಸದ ಗಂಡನ ಮನೆಗೆ ಹೋದ ಗೌರಿ ಮತ್ತೆ ತನ್ನ ಭೂಮಿಯ ಮೇಲಿನ ತವರು ಮನೆಗೆ ಮುಂದಿನ ವರ್ಷ ತಪ್ಪದೆ ಬರುತ್ತಾಳೆ...ಕೊನೇ ಪಕ್ಷ ತನ್ನ ಹಳ್ಳಿಯ ಗೆಣೆಕಾರ್ತಿಯರನ್ನು ಮಾತನಾಡಿಸಲಾದರೂ!!
ಆಡಿ ನಲಿಯುತ್ತಿರುವ ಗೌರಿ ಮಕ್ಕಳು

ಗೌರಿ ಮಣ್ಣಿನ ಗುಡ್ಡೆಯ ಮುಂದೆ ಗೌರಿಯರು!

ಸರ್ವಾಲಂಕಾರ ಭೂಷಿತೆ ಗೌರಿ..


ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...