Friday 21 December 2018

"ನಾನಿಲ್ಲ"

ಹೆಪ್ಪುಗಟ್ಟಿದೆ ಚಿತ್ತ
ಮೇಲೆಲ್ಲ ಬೆಳೆದ ಹುತ್ತ
ನೆಲವು ಮೌನವ ತಬ್ಬಿ
ಮುಗಿಲು ನನ್ನೆದೆಗೆ ಹಬ್ಬಿ
ಕಾಲ ಕೂಡಾ..ಸ್ವಲ್ಪ ಕಾಲ,
ಕುಳಿತು ಮಲಗಿದ ಘಳಿಗೆ...
ನಾನಿಲ್ಲ ನನ್ನಯ ಒಳಗೆ..

Thursday 20 December 2018

ಹುಚ್ಚು ಖೋಡಿ ಮನಸು -೧೩

ಮುಗಿಲ ಎದೆಯಲ್ಲಿ ತಲೆಯನಿಟ್ಟು
ಭೋರೆಂದು ಅಳಬೇಕೆನಿಸಿತ್ತು..
ಕರಿಮೋಡವೊಂದು ನನಗೆ ಮರುಗಿ
ಕಂಬನಿಯ ತುಂತುರು ಹನಿಸಿತ್ತು..

ನನ್ನ ಗೋರಿ ನಾನೇ ಬಗೆದು
ಅಲ್ಲೇ ತಣ್ಣಗೆ ಮಲಗಬೇಕೆನಿಸಿತ್ತು..
ನೀನಿಲ್ಲದ ಜೀವ-ಜೀವನ ಸಾಕೆನಿಸಿತ್ತು.
ಸತ್ತ ಕನಸುಗಳ ಹೆಣ..ಕೊಳೆತು ನಾರುತ್ತಿತ್ತು

ಇಷ್ಟು ದಿನಗಳ ಕಾಲ ನೀನಿಲ್ಲದ ಬದುಕು
ಸವೆಸಿದ್ದಕ್ಕೆ , ನನ್ನ ಮೇಲೆಯೇ ಜಿಗುಪ್ಸೆ!

 ಹೋಗಲಿ ಬಿಡು ಬಂಗಾರ...
ನೀ ಬಿಟ್ಟುಹೋದ ನೆನಪುಗಳನ್ನೇ
ನೆಟ್ಟು ನೀರೆರೆದು,ಬೆಳೆಸಿ, ಅದರ ಬುಡದಲ್ಲೇ
ಕೊನೆಯ ಕನಸ ಹೂ ಅರಳಿಸುತ್ತೇನೆ.
ಈ ಜಲುಮಕ್ಕೆ ಅಷ್ಟು ಸಾಕು ಬಿಡು!

ಕನವರಿಸಿತ್ತು ನೋಡು ಅರ್ಧಜೀವದ ಕನಸು
ಏನಂದೀತು ಕೇಳು ನಿನ್ನ ಹುಚ್ಚು ಖೋಡಿ ಮನಸು!



ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...