Monday 4 September 2017

...ನಿಜಕ್ಕೂ ಉರಿಯುತ್ತಿರುವುದು ಮಣ್ಣು!

ದೇಶದ ಉಪರಾಷ್ಟ್ರಪತಿಯೊಬ್ಬರು ತಮ್ಮ ಅಭದ್ರತೆಯ ಬಗ್ಗೆ ಮಾತನಾಡಿದ್ದಾರೆ..ಆ ಮೂಲಕ ದೇಶದ ಅಸಹಷ್ಣತೆಯ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ..ಹಾಗೆ ನೋಡಿದರೆ,ದೇಶದಲ್ಲಿ ಇದ್ದಿರಬಹುದಾದ intoleranceನ್ನು ಮೊದಲು ಗುರುತಿಸಬೇಕಿದ್ದುದು ಮಾಧ್ಯಮಗಳಾಗಬೇಕಿತ್ತು,ಆದರೆ ಚಲನಶೀಲ(in motion?)ಸಾಹಿತ್ಯವಲಯ ಅದನ್ನು ಗುರುತಿಸಿತು,ನಂತರ ಕೆಲ stationary(ಕುಂತಲ್ಲೆ ಗಿರಗಿಟ್ಲೆ ಹೊಡೆಯುವ)ಸಾಹಿತಿಗಳು ಅವರನ್ನು ಅನುಸರಿಸಿದರು.
...ಸ್ವೀಕರಿಸುವಾಗ ಪಡೆದ ಪ್ರಚಾರವನ್ನು ಸಕಲೆಂಟು ಮಾಧ್ಯಮಗಳ ಕವರಿಂಗ್ ಅಡಿ ಪ್ರಶಸ್ತಿ ಹಿಂತಿರುಗಿಸುವಾಗಲೂ ಪಡೆದರು.
ಇವರೆಲ್ಲರೂ ಅಕಾಡೆಮಿಕ್ ವಲಯ,ಪರಿಷತ್ತು,ಮಾಧ್ಯಮಗಳಿಂದ ಬಂದವರಾಗಿದ್ದು ಸಹಜವಾಗಿಯೇ ನಗರ ಪ್ರದೇಶಗಳಲ್ಲಿ ವಾಸಿಸುವವರಾದ್ದರಿಂದ,ಅವರು ನಗರ ಪ್ರದೇಶಗಳಲ್ಲಿ ಇರುವಂಥ intolerance ನ್ನು ಮಾತ್ರವೇ ಗುರುತಿಸಿದ್ದರು.
ದೇಶದ ಹಳ್ಳಿಗಳಲ್ಲಿ ಇರುವ intoleleranceಬಗ್ಗೆ ಯಾವ ಮಾಧ್ಯಮಗಳೂ ಆಸಕ್ತಿ ತೋರಿಸಲಿಲ್ಲ.
ವಾಸ್ತವವಾಗಿ ನಿಜವಾದ intolerance ಇರುವುದು ಹಳ್ಳಿಗಳಲ್ಲಿ!ಭೂಮಿಯನ್ನು ನಂಬಿ ಬದುಕುತ್ತಿರುವವರ ಬದುಕಿನಲ್ಲಿ!ಪ್ರತಿದಿನವೂ ಕ್ಷಣವೂ ಅಸಹನೆ,ಅಸಹಿಷ್ಣತೆಗಳು ತಾಂಡವಿಸುತ್ತಿವೆ!ಹಳ್ಳಿಗಳಲ್ಲಿನ ಜನ ಭಯದ ಮಧ್ಯೆ ಬದುಕುತ್ತಿದ್ದಾರೆ!
ಅದಕ್ಕೆ ಪ್ರಕೃತಿ ಕಾರಣವೋ,ಪಕ್ಷಗಳು ಕಾರಣವೋ,ಪ್ರಧಾನಿ ಕಾರಣವೋ ಗೊತ್ತಿಲ್ಲ.
ಜನಗಳಲ್ಲಿ ಮೊದಲಿದ್ದ ಸಾಮರಸ್ಯ ಈಗುಳಿದಿಲ್ಲ.ಯಾವ ಹಬ್ಬಗಳೂ ವಿವಾದ,ಹೊಡೆದಾಟಗಳಿಲ್ಲದೆ ನಡೆಯುತ್ತಿಲ್ಲ.ಯಾವ ಯೋಜನೆಗಳೂ ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿಲ್ಲ.
ಸಾರಾಯಿ ಬಂದ್ ಆದಾಗಿನಿಂದ ಹಳ್ಳಿಗಳ ಎಲ್ಲಾ ಸಣ್ಣಪುಟ್ಟ ಕಿರಾಣಿ,ಗೂಡಂಗಡಿಗಳಲ್ಲೂ ಲಿಕ್ಕರ್  ಸಿಗುತ್ತಿರುವುದರಿಂದ ಹಳ್ಳಿಗಳಲ್ಲಿನ ಹುಡಗರೆಲ್ಲಾ ಹಗಲುಗುಡುಕರಾಗುತ್ತಿರುವುದಕ್ಕೆ ಯಾವ ಮುಖ್ಯಮಂತ್ತ್ರಿ ಕಾರಣವೋ ಗೊತ್ತಿಲ್ಲ.
ಪ್ರತಿಭಟಿಸಲು ಸಾಹಿತಿಗಳಿಗೇನೋ ಸರ್ಕಾರ ಕೊಟ್ಟ ಪ್ರಶಸ್ತಿಯ ತಗಡಿನ ಫಲಕಗಳೋ  ಪದಕಗಳೋ ಇದ್ದವು....ಹಳ್ಳಿಗಳಲ್ಲಿನ ರೈತರಲ್ಲಿ ಜೀವವೊಂದು ಬಿಟ್ಟು ಬೇರೆ ಏನು ತಾನೇ ಉಳಿದಿತ್ತು?....ಅದನ್ನೇ ರೈತ ಸರ್ಕಾರಕ್ಕೆ ಅತ್ಯಂತ ವಿನಯದಿಂದಲೇ ಅರ್ಪಿಸಿಕೊಳ್ಳುತ್ತಿದ್ದಾನೆ.
ಕೆಲವರು ಅದನ್ನೂ ಕೂಡಾ ವ್ಯಂಗ್ಯವಾಗಿಯೇ ನೋಡುತ್ತಿದ್ದಾರೆ....
ಅದಿರಲಿ,ರೈತರಿಗೆ ದೇಶದಲ್ಲಿನ ,ರಾಜ್ಯದಲ್ಲಿನ,ಅವರ ಊರು,ಅವರ ಬದುಕುಗಳಲ್ಲಿನ intolerance ವಿರುದ್ಧ ಪ್ರತಿಭಟಿಸಲು ಆತ್ಮಹತ್ಯೆಗಿಂತಲೂ ಬೇರೆ ರೀತಿಯ ಗೌರವಯುತವಾದದಾರಿಗಳು ಯಾವೂ ಇಲ್ಲವೇ?ಅವರ ಆತ್ಮಹತ್ಯೆಗಳೂ intoleranceವಿರುದ್ಧದ ಪ್ರತಿಭಟನೆ ಎಂದು ಸರ್ಕಾರಗಳು,ಮಾಧ್ಯಮಗಳಿಗೆ ಅನಿಸುವುದು ಯಾವಾಗ?

x

Saturday 2 September 2017

"ಆಹ್ವಾನ"




ಚಿತ್ತಭಿತ್ತಿಯ ತುಂಬ
ನಿನ್ನದೇ ಚಿತ್ತಾರ
ಕೆತ್ತಿರುವೆ ಹುಡುಗೀ...
ಉಬ್ಬು ತಗ್ಗುಗಳವು
ಅಳತೆ ಮೀರಿ ಮೂಡಿಹವು
ಸರಿಪಡಿಸು ಬಾರೇ...
ನೀ ಕೇಳಿದ್ದೆ ಕೊಡುವೆ!

ಎದೆಯ ಬಾಂದಳವ
ಗುಡಿಸಿ ಸಾರಿಸಿಕೊಂಡು
ಹೂಹರಡಿ ಕಂಪಡರಿ
ಬಾಗಿಲಲಿ ಕಾದಿರುವೆ
ಒಳಗೆ ಬಾ ಹುಡುಗಾ...
ಅಂಗಳದ ರಂಗೋಲಿಯ ತುಳಿಯದೆ
ನೀ ಕೇಳಿದ್ದನ್ನೇ ಕೊಡುವೆ!

ಜೋಕುಮಾರನೆಂಬ ಫಲವಂತಿಕೆಯ ಸಂಕೇತ!

ಗ್ರಾಮಭಾರತದಲ್ಲಿ ದೇಸೀ ಹಬ್ಬಗಳು ಈ ಆಧುನಿಕ ಯುಗದಲ್ಲೂ ಪಳೆಯುಳಿಕೆಯ ರೂಪದಲ್ಲಿಯಾದರೂ ಇನ್ನೂ ಆಚರಿಸಲ್ಪಡುತ್ತಿರುವುದು ಅವುಗಳ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.
ಜೋಕುಮಾರನ ಹಬ್ಬ ಅಂಥದೊಂದು ಅಪ್ಪಟ ದೇಸೀಯ,ಜನಪದ ಸಮೃದ್ಧ ಆಚರಣೆ! ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಹುಮುಖ್ಯ ಹಳ್ಳಿ ಹಬ್ಬಗಳಲ್ಲೊಂದು!

ಜೋಕುಮಾರನನ್ನು ಇತ್ತೀಚೆಗೆ ಕೆಲವರು ವೇದ-ಪುರಾಣಗಳಿಗೆಲ್ಲ ಲಿಂಕ್ ಮಾಡಿ,ಅವನನ್ನು ಶಿವನ ಮಗನೆಂದೂ,ಮನ್ಮಥನ ಅವತಾರವೆಂದೂ ಹೇಳುತ್ತಿರುವರಾದರೂ ಅದರ ಬಗ್ಗೆ ಯಾವುದೇ ಉಲ್ಲೇಖಗಳು ಯಾವ ಪುರಾಣಗಳಲ್ಲೂ ಇಲ್ಲ...ಹಾಗಾಗಿ ಜೋಕುಮಾರಸ್ವಾಮಿಯು ಗಣೇಶ,ಶಿವ,ವಿಷ್ಣುವಿನಂಥ ಶಿಷ್ಟ ದೇವತೆಯಲ್ಲ..ವಿಶಿಷ್ಟ ದೈವ! ದುಡಿವ ವರ್ಗದ ಫಲದೈವ!

ಜೋಕುಮಾರಸ್ವಾಮಿಯ ವಿಧ್ಯುಕ್ತ ಆಚರಣೆಯು ಪ್ರತಿ ವರ್ಷ ಗಣೇಶ ವಿಸರ್ಜನೆಯ ನಂತರ ಅಂದರೆ ಭಾದ್ರಪದ ಅಷ್ಟಮಿಯ ದಿನ ಪ್ರಾರಂಭವಾಗುತ್ತದೆ.ಜೋಕುಮಾರ ಹುಟ್ಟುವುದು "ಬಾರೀಕರು" ಎಂಬ ಪಂಗಡದ ಮನೆಯಲ್ಲಿ.ಆ ಜಾತಿಯ ಹೆಂಗಳೆಯರೇ ಅವನನ್ನು ಹಳ್ಳಿಹಳ್ಳಿಗೂ ಹೊತ್ತು ತಿರುಗಿ "ಊರು ಆಡುವ" ಕಾರ್ಯ ಮಾಡುತ್ತಾರೆ.ನಂತರ ಕೆರೆಯೋ ಹಳ್ಳದ ಬದಿಯೋ "ಸಾಯಿಸುವ" ಕಾರ್ಯ ಮಾಡುತ್ತಾರೆ.ಅಂತ್ಯ ಸಂಸ್ಕಾರದ ಜವಾಬ್ದಾರಿ ಮಡಿವಾಳ ಜನಾಂಗದವರದ್ದು..! ಒಟ್ಟು ಜೋಕುಮಾರನ ಆಯಸ್ಸು ಕೇವಲ ಏಳು ದಿನಗಳಷ್ಟೆ!

ಅನಂತನ ಹುಣ್ಣಿಮೆ ಅಥವಾ ಜೋಕುಮಾರನ ಹುಣ್ಣಿಮೆಯ ದಿನ ಜೋಕುಮಾರನ ತಿಥಿಯ ರೂಪದಲ್ಲಿ ಗ್ರಾಮದ ಎಲ್ಲರೂ ಹಬ್ಬ ಆಚರಿಸುತ್ತಾರೆ.ತುಂಬು ಫಸಲಿನ ಹೊಲಗಳಿಗೆ "ಹಸಿರಂಬಲಿ" ಮತ್ತು "ಹಾಲಂಬಲಿ" ಎಂಬ ಚೆರಗವನ್ನು ಚೆಲ್ಲುತ್ತಾರೆ.ಫಸಲನ್ನು ಪೂಜಿಸಿ ಎಡೆಯಿಟ್ಟು ನಮಿಸುತ್ತಾರೆ.

ಈ ಹಬ್ಬಕ್ಕಾಗಿಯೇ ಮಾಡುವ "ಮಿದಿಕಿ" ಎಂಬ ವಿಶಿಷ್ಟ ತಿನಿಸಿದೆ.ಬಹುಶಃ ಅದು "ಮೋದಕ" ದ ಇನ್ನೊಂದು ರೂಪವಿರಬಹುದು.ಸಜ್ಜೆ,ಗೋಧಿ,ಬೆಲ್ಲಗಳಿಂದ ತಯಾರಿಸುವ ಈ ಮಿದಿಕೆಯನ್ನು ಜೋಕುಮಾರನ ಹಬ್ಬ ಹೊರತುಪಡಿಸಿ ಬೇರಾವ ಸಂದರ್ಭದಲ್ಲೂ ನಮ್ಮ ಹಳ್ಳಿಗರು ಮಾಡುವುದಿಲ್ಲ...ಆ ಮಟ್ಟಿಗಿನ ಅನನ್ಯತೆ ಅವನದು!
ಜೋಕುಮಾರ ಮೂರ್ತಿಯ ರೂಪು ಬಹುತೇಕ ಪುರುಷ ಜನನಾಂಗವನ್ನು ಹೋಲುತ್ತದೆ...ಹಾಗೆಯೇ ಜೋಕುಮಾರನನ್ನು ಹೊತ್ತು ತರುವ ಹೆಂಗಸರು ರೈತ ಮಹಿಳೆಯರಿಂದ ಕಾಳು-ಕಡಿ ಹಾಗೂ ಜೋಕುಮಾರನಿಗೆ ಪ್ರಿಯವಾದ ಎಮ್ಮೆಯ ಮೀಸಲು ಬೆಣ್ಣೆ ಪಡೆದು,ಅದಕ್ಕೆ ಪ್ರತಿಯಾಗಿ ಜೋಕುಮಾರನ ಜನನೇಂದ್ರಿಯ ಕೂದಲನ್ನೇ ಪ್ರಸಾದ ರೂಪದಲ್ಲಿ ಕೊಡುತ್ತಾರೆ.ರೈತರೂ ಆ ಕೂದಲುಗಳನ್ನು ಭಕ್ತಿಯಿಂದಲೇ ಸ್ವೀಕರಿಸಿ,ತಮ್ಮ ಹೊಲಗಳಿಗೆ ಹಾಕುತ್ತಾರೆ..!

ಹೌದು;ಜೋಕುಮಾರ,ಫಲವಂತಿಕೆಯ ಸಂಕೇತವಾಗಿಯೂ ಆರಾಧಿಸಲ್ಪಡುತ್ತಾನೆ.ರೈತರ ಹೊಲದ ಬೆಳೆಗಳೆಲ್ಲಾ ಕಾಳು ಕಟ್ಟುವ ಸಮಯ ಇದಾಗಿರುವುದರಿಂದ ನಮ್ಮ ಬೆಳೆಗಳು ಜೊಳ್ಳಾಗದಿರಲಿ ಎಂಬುದರ ಅರ್ಥಪೂರ್ಣ ಪ್ರತಿಮಾರಾಧನೆ ಇದು...ಹಾಗೆಯೇ ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಹೆಂಗಳೆಯರಿಗೂ ಈ ಹದಿನೈದು ದಿನಗಳ "ಜೋಕುಮಾರನ ಅಳಲು" ಎಂಬ ಕಟ್ಟಳೆ ಹಾಕಲಾಗುತ್ತದೆ,ಅದರ ಪ್ರಕಾರ ಈ ಅವಧಿಯಲ್ಲಿ ಅವರು ತವರುಮನೆಯಲ್ಲಿ ಇರುವುದು ನಿಷಿದ್ಧವಾಗುತ್ತದೆ..ಗಂಡನ ಜೊತೆಯೆ ಇರಬೇಕಾಗಿರುತ್ತದೆ!!
ಜೋಕುಮಾರನ ಬಗೆಗಿನ ಜನಪದ ಹಾಡುಗಳಂತೂ ಧಂಡಿಯಾಗಿವೆ.ಹಳ್ಳಿಗರ ಕಾಮದೇವನೆಂಬಂತೆ ಅವನನ್ನು ಜನಪದದಲ್ಲಿ ವಿಡಂಬಿಸಲಾಗಿದೆ.

ಬಾಗಾನ ಮಗ ಬಂದು
ಬಾಗೀಲಾಗೇ ಕುಂತಾನವ್ವಾ...
ಬೇಗಾನೇ ಬೆಣ್ಣೆ ಕೊಡಿರವ್ವಾ..
ಬೇಗಾನೆ ಬೆಣ್ಣೆ ಕೊಡಿರವ್ವ ನಮ್ಮ
ಕೊಮಾರ
ಸಾಗಾನೆ ಮರದಾ ಸವಿಮುದ್ದು...
ಅಡ್ಡಡ್ಡ ಮಳೆ ಬಂದು ಒಡ್ಡುಗೋಳೊ
ದಿಡ್ಡಿಗೋದೋ
ನಮ್ಮ ಗೊಡ್ಡು ದನವೆಲ್ಲಾ ಹೈನಾದೋ
......ಹೀಗೇ ಅನೇಕ ಜನಪದ ಹಾಡುಗಳಲ್ಲಿ ಜೋಕುಮಾರನನ್ನು ಹಾಸ್ಯರೂಪದಲ್ಲಿಯೆ ಚಿತ್ರಿಸಲಾಗಿದೆ...!

ಕನ್ನಡದ ಜಾನಪದದ ಬೇರುಗಳು ಇಂದಿಗೂ ಚಿಗುರು ಮುಚ್ಚಿ ಕಂಗೊಳಿಸಿಕೊಂಡಿರಲಿಕ್ಕೆ ಇಂಥ ದೇಸೀಯ ದೈವಗಳ ಕೊಡುಗೆ ಗಮನಾರ್ಹವಾದುದು.
ಆಧುನಿಕತೆ ಎಂಬ ಕೃತಕ ಲೋಕದಲ್ಲಿ ಬದುಕುತ್ತಿರುವ ನಮಗೆ ಪ್ರಕೃತಿಯಾರಾಧನೆಯೇ ಪರಮೇಶ್ವರನ ಆರಾಧನೆ ಎಂಬ ಪರಿಪೂರ್ಣ ಸಂದೇಶ ಕೊಡಲು ಜೋಕುಮಾರಸ್ವಾಮಿ ಪ್ರತೀ ವರ್ಷವೂ ನಮ್ಮ ಹಳ್ಳಿಗಳೆಡೆ ಬರುತ್ತಲಿದ್ದಾನೆ..
ಪೂಜೆಗೊಳ್ಳುತ್ತಿರುವ ಜೋಕುಮಾರ ಸ್ವಾಮಿ.

ಕಾಣಿಕೆ ನೀಡಿಸಿಕೊಳ್ಳುತ್ತಿರುವ ಜೋಕುಮಾರನ ಬಳಗ(ಬಾರೀಕ ಹೆಂಗಳೆಯರು)

Friday 1 September 2017

...ಕಾದ ನೆನಪು ಕಾಡುತ್ತಲಿದೆ.

ಬಾಲ್ಯವೇ ಹಾಗೇ...ಕೊನೆಯ ತನಕ ಕಾಡುತ್ತಲೇ ಇರುತ್ತದೆ.ಅದರಲ್ಲೂ ಹಳ್ಳಿಗರ ಬಾಲ್ಯವಂತೂ ನೆನಪುಗಳ ಕುಂಭದ್ರೋಣ ಮಳೆ!
ಚಿಕ್ಕವರಿದ್ದಾಗ ಎಮ್ಮೆ-ದನಗಳನ್ನು ಮೇಯಿಸಲು ಕಾಡಿಗೆ ಹೋಗುತ್ತಿದ್ದ ನೆನಪು ನಿಮಗೂ ಇರಬಹುದೇನೋ...ಭಾನುವಾರದ ರಜೆಯಿರಲಿ,ಶನಿವಾರವೂ ಶಾಲೆಗೇ ಪೋಷಕರು ಬಂದು ಮಕ್ಕಳನ್ನು ದನಕಾಯಲು ಕರೆದುಕೊಂಡು ಹೋಗುತ್ತಿದ್ದ ದಿನಗಳವು!
ಕೋಟೆಗಡ್ಡೆ ಅಡವಿ,ಗುಡ್ಡದ ಅಡವಿಗಳಲ್ಲಿ ಗೆಳೆಯರೊಂದಿಗೆ ಓಡಾಡಿದ್ದು ಇನ್ನೂ ಹಚ್ಚಹಸಿರಾಗಿದೆ ನನ್ನ ಸ್ಮೃತಿಪಟಲದಲ್ಲಿ!
ಮೊದಲ ಬಾರಿಗೆ 'ಬಿದ್ದ ಗುಂಡು' ಹತ್ತಿದಾಗ ಎಷ್ಟು ಸಂತೋಷವಾಗಿತ್ತೊ,ಮೊದಲ ಬಾರಿ ನರಿಗವಿಯ ಬಾಗಿಲಲ್ಲಿ ಹಣಿಕಿದಾಗ ಅಷ್ಟೇ ಭಯವೂ ಆಗಿತ್ತಾಗ!
ನಿಂಬಳಗೆರೆ ಗುಡ್ಡ ಹತ್ತಿದಾಗ ಮೌಂಟ್ ಎವೆರೆಸ್ಟ್ ಹತ್ತಿದಷ್ಟೇ ಖುಷಿಯೂ ಆಗಿತ್ತು...
ಆಗೆಲ್ಲಾ ನಮ್ಮ ಜೊತೆ ಊರಿನ ವಯಸ್ಸಾದ ಅಜ್ಜಿಯಂದಿರೂ ಬರುತ್ತಿದ್ದುದರಿಂದ ಅವರೇ ನಮ್ಮ ಮೊದಲ ಗೈಡುಗಳೂ ಆಗಿರುತ್ತಿದ್ದರು.
ದನಗಳನ್ನು ಅಡವಿಗೆ ಹೊಡೆದುಕೊಂಡು ಹೋಗುವಾಗ ಹಾದಿಬದಿಯ ಹೊಲದವರ ಜೊತೆ ನಿತ್ಯವೂ ನಡೆಯುತ್ತಿದ್ದ ಜಗಳ-ಕದನಗಳದ್ದೇ ಒಂದು ಕಥೆಯಾದರೆ,ಮನೆಗೆ ಹಿಂತಿರುಗುವಾಗ ಬೇಕೆಂತಲೇ ತಡಮಾಡಿ,ಹೊಲದವರೆಲ್ಲಾ ಹೋದ ನಂತರ ಅವರ ಹೊಲಗಳ ಮೇಲೆ ನಾವೂ ನಮ್ಮ ದನಗಳೂ ರೋಷ ತೀರಿಸಿಕೊಳ್ಳುತ್ತಿದ್ದ ಕಥೆಯೆ ಬೇರೆ!
ಮೊದಮೊದಲು ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದುದೂ ಉಂಟು,ಮುದ್ದೆಯ ಮೇಲೆ ಒಂದು ಕುಳಿ ಮಾಡಿ ಅದರಲ್ಲಿ ಬೆಣ್ಣೆಯ ಉಂಡೆಯೋ,ಬದನೇ ಚಟ್ನಿಯೋ,ಗುರೆಳ್ಳು ಪುಡಿಯೋ ಹಾಕಿ ಬಟ್ಟೆಯ ಪುಟ್ಟ ಗಂಟೊಂದನ್ನು ನಮ್ಮ ಅಕ್ಕಂದಿರೋ ಅಮ್ಮನೋ ಕಟ್ಟಿಕಳಿಸುತ್ತಿದ್ದರು.
ಆ ಗಂಟು ಟವೆಲ್ಲಿನ ಒಂದು ತುದಿಗೆ ಸೇರಿ ತಲೆ ಮೇಲಿಂದ ನೇತಾಡುವಂತೆ ಬಿಗಿದುಕೊಂಡು ಹೊರಡುತ್ತಿದ್ದೆವು.
ಬುತ್ತಿಯನ್ನು ಹೋದ ಕೂಡಲೇ ಉಂಡುಬಿಡುವ ಅವಸರ ನಮಗೆ! ಗುಡ್ಡದ ಕೆಳಗೋ,ಅಡವಿಯ ಅಲ್ಲಲ್ಲಿ ಹರಿಯುತ್ತಿದ್ದ ಪರಿಶುಭ್ರ ನೀರಿನಾಸರೆ ಸಿಕ್ಕೊಡನೆ ಊಟ ಮುಗಿಯುತ್ತಿತ್ತು.ತೀರಾ ಮಳೆ ಬರದೆ ಬಹಳ ದಿನವಾಗಿ ಹಳ್ಳ/ಸರ ಬತ್ತಿದ್ದರೆ "ಒರತೆ" ಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆವು.
ಅಡವಿಗಳಲ್ಲಿ ಆಟಕ್ಕೇನೂ ಕೊರತೆಯಿರಲಿಲ್ಲ.'ತೀಟೆ ಸೊಪ್ಪು'ಎನ್ನುವ ಉರಿಯುಂಟುಮಾಡುವ ಗಿಡವೊಂದು ಗುಡ್ಡದ ಮಟ್ಟಿಯ ಕೆಳಗೆ ಸಿಗುತ್ತಿತ್ತು..ಅದರಿಂದ ಯಾರಿಗಾದರೂ ಸೋಕಿಸಿದರೆ ನವೆ-ಉರಿಯ ಅನುಭವವಾಗಿ ದದ್ದುಗಳೇಳುತ್ತಿದ್ದವು.ನಾವು ಆ ತೀಟೆ ಸೊಪ್ಪಿನ ಗಿಡಗಳನ್ನು ಹಿಡಿದು ಒಬ್ಬರಿಗೊಬ್ಬರು ಬಡಿದಾಡುತ್ತಿದ್ದೆವು!
ಸೇಂಗಾ ಬಳ್ಳಿಯ ಹೊರೆಗಳನ್ನು ರಾಶಿ ಹಾಕಿ ಸುಟ್ಟು,ಸುತ್ತಲೂ ಮಾತನಾಡುತ್ತಾ ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜವೇ ಬೇರೆ! ಸೂರ್ಯಕಾಂತಿ ತೆನೆಗಳನ್ನು ಕಿತ್ತು ವೃತ್ತಾಕಾರವಾಗಿ ಕಾಳು ಬಿಡಿಸುತ್ತಾ ಹಲ್ಲುಗಳೆಲ್ಲಾ ಕಪ್ಪಡರುವುವರೆಗೂ ತಿನ್ನುತ್ತಿದ್ದೆವು.
ದನಗಳು ಕಾಣದೆ ಮರೆಯಾಗಿ,'ಕಳೆದು ಹೋದಾಗ' ಎಲ್ಲರೂ ಪರಸ್ಪರ ಸಹಾಯಕ್ಕೆ ಬರುತ್ತ ಹುಡುಕಲು ಹೊರಡುತ್ತಿದ್ದೆವು.ಎತ್ತರದ ಮಟ್ಟಿಗಳನ್ನು ಹತ್ತಿ ನೋಡಿ ಕಂಡು ಹಿಡಿಯುತ್ತಿದ್ದೆವು.ಇನ್ನೂ ಕಾಣದಿದ್ದರೆ ಹತ್ತಿರದ ಗುಡ್ಡ ಹತ್ತುತ್ತಿದ್ದೆವು.
ತುಂಬಾ ಹೊತ್ತು ದನ ಸಿಗದೇ ಇದ್ದಾಗ ಅಳುವ,ಅಳುವವರನ್ನು ನೋಡಿ ನಗುವ ಕಲಾಪ ಇದ್ದೇ ಇರುತ್ತಾದರೂ ದನಗಳು ಮಾತ್ರ ತಪ್ಪದೆ ಸಾಯಂಕಾಲದ ಹೊತ್ತಿಗೆ ತಮ್ಮಷ್ಟಕ್ಕೆ ತಾವೇ ಎಲ್ಲೆಲ್ಲೋ ಮೇದು ಮನೆಗೆ ಮರುಳುತ್ತಿದ್ದವು.ನಮ್ಮ ಸಿಟ್ಟಿನ ಪ್ರಹಾರ ಅವುಗಳ ಮೇಲಾಗುತ್ತಿತ್ತು ಆಗ!
ಹೊಟ್ಟೆ ಹಸಿದಾಗ ಕಾರೆಹಣ್ಣು,ಬುಕ್ಕಿಹಣ್ಣು,ಹುಲುಲಿ ಹಣ್ಣು,ಪುಟ್ಲಾಸು ಹಣ್ಣು,ಕವುಳಿ ಹಣ್ಣುಗಳು ಧಂಡಿಯಾಗಿ ಸಿಗುತ್ತಿದ್ದ ಕಾಲವದು.ಬಸಳೀಕದ ಗಡ್ಡೆಯೋ,ಈಚಲ ಗಡ್ಡೆಯೋ ಅಪರೂಪವಾಗಿ ನಮ್ಮ ಹೊಟ್ಟೆ ಸೇರುತ್ತಿದ್ದುದೂ ಉಂಟು.
ಒಮ್ಮೊಮ್ಮೆ ಎಲ್ಲರೂ ಹತ್ತತ್ತು ರೂಪಾಯಿ ಹಣ ಹಾಕಿ ಕಾಡಿನಲ್ಲೇ ಮಂಡಾಳು ಒಗ್ಗರಣೆಯನ್ನೋ ಮಿರ್ಚಿಯನ್ನೋ ಮಾಡುತ್ತಿದ್ದುದೂ ಉಂಟು.
ಮುಂಗಾರಿನ ಸಮಯದಲ್ಲಿ ದನ ಮೇಯಿಸುವುದರಲ್ಲಿದ್ದ ಮಜಕ್ಕಿಂತಲೂ 'ಹಕ್ಕಲು'ಕಾಲದಲ್ಲೇ ಹೆಚ್ಚು ಮಜವಿರುತ್ತಿತ್ತು.ಎತ್ತುಗಳಿಗೂ ಬಿಡವಿನ ಕಾಲವಾದ್ದರಿಂದ ಎತ್ತುಗಳೂ,ಅವುಗಳ ಜೊತೆ ದೊಡ್ಡವರೂ ಬರುತ್ತಿದ್ದುದರಿಂದ ದನಕಾಯುವವರ ಸಂಖ್ಯೆ ಆಗ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು.ಚಿಣ್ಣಿದಾಂಡು,ಚೀಟಿ ಆಟ,ಜೂಜು,ಇಸ್ಪೀಟಾಟಗಳೂ ರಂಗೇರುತ್ತಿದ್ದವು.ಎಷ್ಟೋ ಜನ ಈ ದನಕಾಯುವುದರಲ್ಲಿನ ಸುಖದ ಆಕರ್ಷಣೆಯಿಂದಾಗಿ ಶಾಲೆಗಳನ್ನೇ ತೊರೆದಿದ್ದರು.ಬೇರೆ ಊರಿಗೆ ಓದಲು ಹೋಗುವವರಿಗೂ ಇದೊಂದು ಅವರನ್ನು obsessionನಂತೆ ಕಾಡುತ್ತಲೇ ಇರುತ್ತಿತ್ತು!

ನಿಜ; ಆಗ ನಮ್ಮ ಬದುಕು ಸರಳವಾಗಿತ್ತು.ಹಳ್ಳಿಯ ವ್ಯವಸ್ಥೆ ಈ ಮಟ್ಟಿಗೆ ಸಂಕೀರ್ಣಗೊಂಡು ಕಲುಷಿತಗೊಂಡು ಸೂಕ್ಷ್ಮತೆಗಳಿಗಿಳಿದಿರಲಿಲ್ಲ.
ಈಗ ಬಿಡಿ...
ಆ ಕಾಡೂ ಇಲ್ಲ,ದನಗಳೂ ಇಲ್ಲ..
ಹಾಗಾಗಿ ಆ ಪ್ರಕೃತಿಯೊಡನಾಟ ಈಗಿನ ಪೀಳಿಗೆಗಳಿಗೆ ದಕ್ಕುತ್ತಿಲ್ಲ..ಮೊಬೈಲಿನ ಗೇಮುಗಳೇ ಅವರ ಚತುರ್ಲೋಕಗಳಾಗಿರುವಂಥ ಕಾಲವಿದು!!
ಆದರೆ...
ಆ ದನಗಳನ್ನು
ಕಾದವರ ನೆನಪಿನಲ್ಲಿ ಮಾತ್ರ ತರೇದ ಮರದ ಮುಳ್ಳಿನಂತೆ ಆಗಾಗ ಮೀಟುತ್ತಲೇ ಇರುತ್ತವೆ..ಆ ಕ್ಷಣಗಳು...ಸಾವಿನಂಚಿನವರೆಗೂ!

ಕವಳೆ ಹಣ್ಣಿನ ಗಿಡ.

ಪುಟ್ಲಾಸು ಕಾಯಿಯ ಮರ.

ಹುಲುಗಿಲಿ ಹಣ್ಣಿನ ಗಿಡ..ತುಂಬೆಲ್ಲಾ ಹಣ್ಣು!

ಕಾರೆಯ ಹಣ್ಣಿನ ಪೊದರು..

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...