Saturday 12 August 2017

ಬಿತ್ತುವುದೇನೋ ಬಿತ್ತಿದ್ದೇವೆ...ಬದುಕುತ್ತೇವಾ?



ಎಂದಿನಂತೆ ಈ ವರ್ಷವೂ ಕೂಡ್ಲಿಗಿಯ ರೈತರಿಗೆ ಮುಂಗಾರಿನ ಬಿತ್ತನೆ ಸುಗ್ಗಿ ಮುಗಿಯುತ್ತ ಬಂದಿದೆ...ಬಿತ್ತಿದ ಬೀಜ ಬೆಳೆಯುತ್ತದೆಯೋ,ಬೆಳೆದದ್ದು ಕಣಕ್ಕೆ ಬರುತ್ತದೆಯೋ,ಕಣಕ್ಕೆ ಬಂದದ್ದು ಕೈಸಿಕ್ಕುತ್ತದೆಯೋ ಎಂಬ ಭರವಸೆ ಯಾರಲ್ಲೂ ಇಲ್ಲ.ಬಹುಶಃ ಕಾರಣೀಕ ದೈವಗಳಾದ ಕೊಟ್ಟೂರಿನ ಕೊಟ್ಟೂರೇಶ್ವರನೋ,ಉಜ್ಜಿನಿಯ ಸಿದ್ದೇಶನೋ,ಶರಣೇಶನೋ ನಮ್ಮನ್ನು ಕಾಯುತ್ತಾನೆ,ಕೈ ಹಿಡಿಯುತ್ತಾನೆ ಎಂಬ ಅದಮ್ಯ ಭರವಸೆ ಅವರದು..! ಒಂದು ಮಟ್ಟಿಗೆ ಅದು ನಿಜವೂ ಕೂಡ!..ಯಾಕೆಂದರೆ ಹಿಂದೆ ಕೆಲ ವರ್ಷಗಳ ಕೆಳಗೆ ನಮ್ಮೂರ ಸುತ್ತಮುತ್ತಲಿನ ತಾಲೂಕುಗಳ ಬೆಳೆಗಳೆಲ್ಲಾ ಸಂಪೂರ್ಣ ಕೈ ಕೊಟ್ಟಿದ್ದರೂ ನಮ್ಮಲ್ಲಿ ಅಂಥಮಟ್ಟಿಗಿನ ನಷ್ಟವೇನೂ ಆಗಿರಲಿಲ್ಲ..ಇವತ್ತಿಗೂ ಕೂಡಾ!!




ಮೊನ್ನೆ ಬೆಂಗಳೂರಿನ ಮಾಧ್ಯಮವೊಂದರಲ್ಲಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿರುವ ನನ್ನ ಮಿತ್ರನನ್ನು ಭೇಟಿಯಾಗಿದ್ದೆ.ಹಾಗೇ ಅದೂ ಇದೂ ಮಾತಾಡುತ್ತಾ ಕೃಷಿಕ ಬದುಕಿನ ಗಂಭೀರವಾದ ಪ್ರಶ್ನೆಯೊಂದನ್ನು ಅವನು ಮುಂದಿಟ್ಟ....ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ. ನಟರ ಮಕ್ಕಳು ನಟರಾಗಲು ಇಚ್ಚಿಸುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ಆದರೆ ರೈತರ ಮಕ್ಕಳು ರೈತರಾಗೋದಕ್ಕೆ ಹಿಂಜರಿಯುತ್ತಿದ್ದಾರೆ. ನಾನು ರೈತನಾಗಲಾರೆ ಅಂತ ಹೇಳುತ್ತಿದ್ದಾರೆ. ರೈತರ ಸಮಸ್ಯೆಗಳು, ತಾಪತ್ರಯಗಳು, ಒಂದರ ಹಿಂದೊಂದರಂತೆ ಎದುರಾಗುವ ತೊಂದರೆಗಳು, ಕೈಗೆ ಹತ್ತದ ಬೆಳೆ, ಏರುವ ಬಡ್ಡಿ, ತೀರಿಸಲಾಗದ ಸಾಲ ಎಲ್ಲವೂ ಸೇರಿಕೊಂಡು ರೈತನನ್ನು ಅಕ್ಷರಶಃ ಕಂಗಾಲು ಮಾಡಿಬಿಟ್ಟಿದೆ. ರೈತನಾಗಿ ಹುಟ್ಟುವುದು ಮತ್ತು ರೈತನಾಗಿಯೇ ಬದುಕುವುದು ಒಂದು ದೌರ್ಭಾಗ್ಯ ಎಂದು ರೈತರೇ ಅಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ತಂದಿಟ್ಟಿದೆ.

ಸ್ಮಾರ್ಟ್‌ಸಿಟಿಗಳನ್ನು ಕಟ್ಟಲು ಹೊರಡುವವರು, ವಿದೇಶಗಳ ಮಾದರಿಯನ್ನು ತಂದು ಮುಂದಿಡುವವರು, ಅನ್ನಭಾಗ್ಯ ಮುಂತಾದ ಯೋಜನೆಗಳನ್ನು ಘೋಷಿಸುವವರು ಇಲ್ಲಿ ಬೇಕಾದಷ್ಟು ಮಂದಿ ಸಿಗುತ್ತಾರೆ. ನಮ್ಮ ಬಹುತೇಕ ರಾಜಕೀಯ ನಾಯಕರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನುವುದನ್ನು ಅವರು ಆರಂಭಿಸುವ ಯೋಜನೆಗಳೇ ಹೇಳುತ್ತವೆ.

ಕತ್ರಿಗುಪ್ಪೆಯಲ್ಲಿ ನಮ್ಮೂರಿನ ಇಪ್ಪತ್ತು ವರುಷದ ತರುಣ ತನ್ನ ಬೆನ್ನಿಗೆ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿರುವ ಹಲಗೆಯನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ. ಅದೇ ಸಂಸ್ಥೆಯವರು ಕೊಟ್ಟ ಟೀಶರ್ಟು, ಪ್ಯಾಂಟು, ಸಾಕಷ್ಟು ದುಬಾರಿಯಾದ ಶೂ ಹಾಕಿಕೊಂಡಿದ್ದ ಆ ಹುಡುಗನನ್ನು ಮಾತಾಡಿಸಿದರೆ, ಅವನು ನಮ್ಮೂರ ರೈತನ ಮಗ ಅನ್ನುವುದು ಗೊತ್ತಾಯಿತು. ಆರೇಳು ಎಕರೆ ಜಮೀನಿದ್ದ ಕಾಲದಲ್ಲಿ ನೀರಾವರಿ ಮಾಡಿ ವೀಳ್ಯದೆಲೆ ತೋಟ,ಜೋಳ ಅವನ ತಾತಂದಿರ ಕಾಲದಲ್ಲಿ ಬೆಳೆಯುತ್ತಿದ್ದರಂತೆ. ಆಮೇಲೆ ರಾಗಿ, ಶೇಂಗಾ,ಹುರುಳಿ ಬೆಳೆಯಲು ಶುರುಮಾಡಿದರಂತೆ. ಇವನ ಕಾಲಕ್ಕೆ ಆಸ್ತಿ ಪಾಲಾಗಿ ಒಂದೆಕರೆ ಹದಿನೆಂಟು ಗುಂಟೆ ಇವನ ಪಾಲಿಗೆ ಬಂದಿತ್ತಂತೆ.

ಅಷ್ಟು ನೆಲದಲ್ಲಿ ಏನಾದರೂ ಬೆಳೆಯೋದಕ್ಕಾಗಲ್ಲವಾ? ತರಕಾರಿ ಬೆಳೆಯಬಹುದಲ್ಲ ಅಂತ ಕೇಳಿದರೆ ಅವನು ಅದು ಸವುಳು ಮಣ್ಣಿರುವ ನೆಲ. ಮಳೆ ಬಿದ್ದರೆ ಮಾತ್ರ ನೀರು. ಬೋರ್ ಕೊರೆಸಿದರೆ ನೀರು ಸಿಗುತ್ತೆ ಅಂತ ಖಾತ್ರಿಯಿಲ್ಲ ಅಂತೆಲ್ಲ ಕತೆ ಹೇಳತೊಡಗಿದ. ಒಟ್ಟಿನಲ್ಲಿ ಆತನಿಗೆ ಊರಲ್ಲಿರಲು ಇಷ್ಟವಿಲ್ಲ, ನಗರಕ್ಕೆ ಬಂದು ಸೇರಬೇಕು ಅನ್ನುವುದು ಅವನ ಮಾತಿನಲ್ಲೇ ಮತ್ತೆ ಮತ್ತೆ ವ್ಯಕ್ತವಾಗುತ್ತಿತ್ತು. ಹೀಗೊಂದು ಬೋರ್ಡು ಬೆನ್ನಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಅಲೆಯೋದು ಆತ್ಮಗೌರವದ ಕೆಲಸ ಹೌದಾ ಅಲ್ಲವಾ ಅನ್ನುವ ಬಗ್ಗೆ ಗೊಂದಲಗಳಿದ್ದವು. ಬೆಂಗಳೂರಲ್ಲಿ ಕೆಲಸ ಅಂತ ಹೇಳಿಕೊಳ್ಳುವುದು ಕುಂಬಳಗುಂಟೆಯ ರೈತ ಎಂದು ಹೇಳಿಕೊಳ್ಳುವುದಕ್ಕಿಂತ ಗೌರವದ್ದು ಎಂದು ಅವನ ಪರಿಸರ ಅವನಿಗೆ ಕಲಿಸಿಕೊಟ್ಟಿತ್ತೇನೋ?

ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ದೇಶದಲ್ಲಿ ಸಹಕಾರಿ ಚಳವಳಿಗಳು ಸತ್ತೇ ಹೋದಂತಿವೆ. ಒಂದು ಕಾಲದಲ್ಲಿ ರೈತರ ಸಹಕಾರಿ ಸಂಘಗಳು, ಸಂಸ್ಥೆಗಳು ರೈತನ ಬೆನ್ನಿಗೆ ನಿಲ್ಲುತ್ತಿದ್ದವು. ಬೆಳೆಗಾರರ ಸಹಕಾರಿ ಸಂಘಗಳು ರೈತನ ಹಿತರಕ್ಷಣೆ ಮಾಡುತ್ತಿದ್ದವು. ಚಿತ್ರದುರ್ಗ,ಚಳ್ಳಕೆರೆಯ ದಲ್ಲಾಳಿ ಅಂಗಡಿಗಳು ಕೂಡ ರೈತನಿಗೆ ಆಪತ್ಕಾಲಕ್ಕೆ ನೆರವಾಗುತ್ತಿದ್ದವು. ಇವತ್ತು ಅಂಥ ಯಾವ ವ್ಯವಸ್ಥೆಯೂ ರೈತನ ಹಿತ ಕಾಯುತ್ತಿಲ್ಲ. ಅದಕ್ಕೆ ಕಾರಣ ರೈತನೂ ಅಲ್ಲ, ಸಹಕಾರಿ ಸಂಘಗಳೂ ಅಲ್ಲ.




ಬಹುಶಃ...

ಮಹಾನಗರದಲ್ಲಿ ತಲೆಯೆತ್ತಿರುವ ಶಾಪಿಂಗ್‌ ಮಾಲ್‌ಗ‌ಳು..! ಅವುಗಳ ಕಾರ್ಯವಿಧಾನ, ಅವುಗಳ ನಡುವಿನ ಪೈಪೋಟಿ. ರೈತನಿಗೆ ತನ್ನ ಉತ್ಪನ್ನವನ್ನು ಎಲ್ಲಿಗೆ ತಲುಪಿಸಬೇಕು ಅನ್ನುವುದೇ ಗೊತ್ತಾಗದ ಸ್ಥಿತಿ!

ಕರ್ನಾಟಕ ಹಾಲು ಮಹಾಮಂಡಲದ ಕಾರ್ಯವೈಖರಿಯನ್ನೇ ನೋಡಿ. ಅದು ಎಷ್ಟು ಅಚ್ಚುಕಟ್ಟಾಗಿ, ಸಮಾನತೆ ಮತ್ತು ಸಹಕಾರ ತತ್ವವನ್ನು ಪಡಿಮೂಡಿಸಿಕೊಂಡು ನಡೆಯುತ್ತಿದೆ. ಅಲ್ಲೇನಾದ್ರೂ ತೊಂದರೆಗಳಾದರೆ, ಅದು ಅಧಿಕಾರ ಹಿಡಿದವರ ದುರಾಸೆಯಿಂದಲೋ ಅಧಿಕಾರ ಲಾಲಸೆಯಿಂದಲೋ ಆಗಬೇಕೇ ಹೊರತು, ರೈತರಿಂದಲೋ ವ್ಯವಸ್ಥೆಯ ಲೋಪದಿಂದಲೋ ಅಲ್ಲ. ಅಂಥದ್ದೇ ಒಂದು ವ್ಯವಸ್ಥೆಯನ್ನು ಅಕ್ಕಿ, ಬೇಳೆ, ತರಕಾರಿ, ಟೊಮ್ಯಾಟೋ- ಇವುಗಳಿಗೂ ಕಲ್ಪಿಸುವುದು ಕಷ್ಟವೇ? ಒಂದು ದಿನ ಇಟ್ಟರೆ ಹಾಳಾಗಿ ಹೋಗುವಂಥ ಹಾಲನ್ನೇ ಶೇಖರಿಸಿ, ಸರಬರಾಜು ಮಾಡುವುದು ಸಾಧ್ಯವಾಗಿರುವಾಗ ಅಂಥದ್ದೇ ಒಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಬೇರೆ ಬೆಳೆಗಾರರಿಗೂ ಯಾಕೆ ಕಲ್ಪಿಸಿಕೊಡಬಾರದು?....

ಒಂದು ಶೇಂಗಾ ಬೆಳೆಗಾರರ ಮಹಾಮಂಡಲ, ವೀಳ್ಯದೆಲೆ ಬೆಳೆಗಾರರ ಮಹಾಮಂಡಲ, ರೇಷ್ಮೆ ಕೃಷಿಕ ಮಹಾಮಂಡಲ,ತರಕಾರಿ ಮಹಾಮಂಡಲ..

ಹೀಗೆ; ಆರಂಭವಾಗಿ, ಲಾಭದಾಸೆಯಿಲ್ಲದೇ, ನಷ್ಟವೂ ಆಗದಂತೆ ಅದು ರೈತರಿಂದ ಗ್ರಾಹಕರಿಗೆ ಅಕ್ಕಿ, ಬೇಳೆ, ತರಕಾರಿಗಳನ್ನು ಹಸ್ತಾಂತರ ಮಾಡುವ ಕೆಲಸ ಯಾಕೆ ಮಾಡಬಾರದು?

ನೀಟಾಗಿ ಪ್ಯಾಕ್‌ ಆಗಿರುವ ವೈವಿಧ್ಯಮಯ ತರಕಾರಿಗಳು ಬೆಳಗ್ಗೆ ಮನೆಗೇ ಬಂದು ಬೀಳುತ್ತವೆ ಅಂದರೆ ಯಾರು ತಾನೇ ಬೇಡ ಅನ್ನುತ್ತಾರೆ.

ರೈತರಿಗೆ ಇರುವ ಶಕ್ತಿಯೇ ಅದು..!




ಗೆಳೆಯರೊಬ್ಬರು ಹೇಳುವಂತೆ ನಮ್ಮ ದೇಶದಲ್ಲಿ ಶೇಕಡಾ 90ರಷ್ಟು ರೈತರಿದ್ದಾರೆ. ಅವರೆಲ್ಲ ಸೇರಿ ಒಂದು ರೈತರ ಪಕ್ಷ ಕಟ್ಟಿದರೆ, ರೈತರೆಲ್ಲ ಜಾತಿ ಮತಗಳ ಬೇಧವಿಲ್ಲದೇ, ನಾವು ರೈತರ ಜಾತಿ ಅಂದುಕೊಂಡು ಮತಹಾಕಿದರೆ, ಇಲ್ಲಿ ರೈತನೊಬ್ಬ ಪ್ರಧಾನ ಮಂತ್ರಿಯೂ ಮುಖ್ಯಮಂತ್ರಿಯೂ ಆಗಬಲ್ಲ. ಇಡೀ ಕ್ಯಾಬಿನೆಟ್ಟಿಗೆ ಕ್ಯಾಬಿನೆಟ್ಟೇ ರೈತರು ತುಂಬಿಕೊಂಡರೆ ನಮ್ಮ ದೇಶದಲ್ಲೊಂದು ಬಹುದೊಡ್ಡ ಕ್ರಾಂತಿಯೇ ಆಗಿಬಿಡಬಹುದು. ಈ ಪ್ರಚಾರದ ರಾಜಕಾರಣ, ಭಾಗ್ಯದ ರಾಜಕಾರಣಗಳನ್ನೆಲ್ಲ ಮೂಲೆಗೆ ತಳ್ಳಿ ಶ್ರಮಸಂಸ್ಕೃತಿಯ ಗೆಲುವು ಕಣ್ಣಿಗೆ ಕಟ್ಟಬಹುದು..!!




ಕಳೆದೊಂದೆರಡು ತಿಂಗಳ ಹಿಂದೆ ಸರ್ಕಾರಿ ಬಸ್ಸಿನಡಿಗೆ ಸಿಕ್ಕಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷವೋ ಐದು ಲಕ್ಷವೋ ಪರಿಹಾರ ಘೋಷಿಸಿತು. ಆ ಊರಿನ ರೈತರೊಬ್ಬರು ಅದನ್ನು ನೋಡಿ ಹೇಳಿದ್ದಿಷ್ಟು: ಆ ಹುಡುಗ ಹೆಲ್ಮೆಟ್‌ ಹಾಕಿರಲಿಲ್ಲ.

ಅವನಿಗೆ ಲೈಸೆನ್ಸ್‌ ಇರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ. ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಿದ್ದ. ಅಷ್ಟೆಲ್ಲ ತಪ್ಪುಗಳನ್ನು ಮಾಡಿ ಬಸ್ಸಿನಡಿಗೆ ಬಿದ್ದು ಸತ್ತ. ಅದರಲ್ಲಿ ಡ್ರೈವರನ ಯಾವ ತಪ್ಪೂ ಇರಲಿಲ್ಲ. ಜನರೆಲ್ಲ ಸೇರಿ ಡ್ರೈವರನಿಗೆ ಹೊಡೆದರು. ಆ ಹುಡುಗನ ಕುಟುಂಬಕ್ಕೆ ಪರಿಹಾರ ಕೊಡಿಸಿದರು. ಮೂವತ್ತು ವರುಷಗಳ ಕಾಲ ಒಂದೇ ಒಂದು ಅಪಘಾತ ಮಾಡದೇ, ಒಂದೇ ಒಂದು ಸಲ ಕಾನೂನು ಭಂಗ ಮಾಡದೇ, ಕೊಟ್ಟ ಸಂಬಳ ತೆಗೆದುಕೊಂಡು, ರಗಳೆ ಮಾಡದೇ, ನಿಯತ್ತಿನಿಂದ ಕೆಲಸ ಮಾಡಿದವನಿಗೆ ಸಿಕ್ಕಿದ್ದು ಧರ್ಮದೇಟು ಮತ್ತು ಶಿಕ್ಷೆ. ಎಲ್ಲಾ ತಪ್ಪುಗಳನ್ನು ಮಾಡಿದವನಿಗೆ ದೊಡ್ಡ ಮೊತ್ತದ ಪರಿಹಾರ. ಇದು ನಮ್ಮ ದೇಶದ ರಾಜಕೀಯ ಸ್ಥಿತಿ ಮತ್ತು ಗತಿ.

.

ಇವತ್ತು ಗ್ರಾಮೀಣ ಭಾರತವನ್ನು ಕೀಳರಿಮೆಗೆ ತಳ್ಳುತ್ತಿರುವುದು ನಮ್ಮ ಮನರಂಜನಾ ಉದ್ಯಮ. ಅದು ಎಲ್ಲಾ ಬದಲಾವಣೆಗಳ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಬಟ್ಟೆ, ಮಾತಿನ ಶೈಲಿ, ಕೆಲಸ ಮಾಡುವ ಕ್ರಮ, ನಿಲುವು, ಒಲವು, ದೃಷ್ಟಿಕೋನ ಎಲ್ಲವನ್ನೂ ಎಂಟರ್‌ಟೇನ್‌ಮೆಂಟ್‌ ಹೆಸರಿನಲ್ಲಿ ಬದಲಾಯಿಸಲಾಗುತ್ತಿದೆ. ಅದರಲ್ಲಿ ಜಾಹೀರಾತುಗಳ ಪಾತ್ರವೂ ಉಂಟು. ಬಟ್ಟೆ ಬಿಳುಪಾಗಿರಬೇಕು, ಮುಖ ಬಿಳುಪಾಗಿರಬೇಕು, ಟಾಯ್ಲೆಟ್ಟು ಅಡುಗೆ ಮನೆಯಂತಿರಬೇಕು, ಮನೆ ಅರಮನೆಯಂತೆ ಇರಬೇಕು ಎಂಬಿತ್ಯಾದಿ ಸಂಗತಿಗಳನ್ನು ಎಷ್ಟು ಸೊಗಸಾಗಿ ಹೇರಲಾಗುತ್ತಿದೆ ಎಂದರೆ ಹಳ್ಳಿಯ ಹುಡುಗ ಹುಡುಗಿಯರು ಕೂಡ ಬಟ್ಟೆಗಳಲ್ಲಿ ಆಧುನಿಕರಾಗುತ್ತಿದ್ದಾರೆ. ಇವತ್ತು ಕೆಲಸ ಇದೆಯೋ ಇಲ್ಲವೋ ಆದಾಯ ಇದೆಯೋ ಇಲ್ಲವೋ ಚೆಂದದ ಬಟ್ಟೆ ಮತ್ತು ಟಚ್‌ಸ್ಕ್ರೀನ್‌ ಮೊಬೈಲು ಅನಿವಾರ್ಯ ಎಂಬ ನಂಬಿಕೆ ಬಂದುಬಿಟ್ಟಿದೆ.

ಶಿಕ್ಷಣ ನಮ್ಮೆಲ್ಲರನ್ನೂ ಹೆಚ್ಚು ಹೆಚ್ಚು ಬುದ್ಧಿವಂತರನ್ನಾಗಿ ಮಾಡಬೇಕಾಗಿತ್ತು. ಆದರೆ ಶಿಕ್ಷಣವೇ ಅತ್ಯಂತ ದಡ್ಡತನದ ಕೆಲಸ ಆದಂತಿದೆ. ವಿದ್ಯೆ ಎಂದರೆ ಮಗು ಮತ್ತು ಒಂದು ಲಕ್ಷ ರೂಪಾಯಿಯನ್ನು ಒಂದು ಕಟ್ಟಡದೊಳಗೆ ಎಸೆಯುವುದು ಎಂದಷ್ಟೇ ಆಗಿಬಿಟ್ಟಿದೆ.

ಇದೆಲ್ಲವನ್ನೂ ಹೇಳಬಾರದು. ಆದರೆ ಹೇಳದೇ ವಿಧಿಯಿಲ್ಲ. ಇದು ಬದಲಾಗುತ್ತದೆ ಅಂತೇನೂ ಖಾತ್ರಿಯಿಲ್ಲ. ಒಂದು ಮನೆಯಿದ್ದರೂ ಮತ್ತೂಂದು ಮನೆ, ಒಂದು ಸೈಟಿದ್ದರೂ ಮತ್ತೂಂದು ಸೈಟು, ಒಂದಿದ್ದರೂ ಮತ್ತೂಂದು ಕೊಂಡುಕೊಂಡು ಸುಭದ್ರರಾಗುವ ಭಾವನೆಯಲ್ಲೇ ನಮ್ಮ ದುರಂತದ ಬೀಜ ಇದ್ದಂತಿದೆ....




ಬಹುಶಃ ರೈತನ ಬದುಕಿನ ಚರಮಕಾಲ ಪ್ರಾರಂಭವಾಗಿದೆಯೇನೋ ಎಂದು ಅನಿಸುತ್ತಿದೆ.



Tuesday 8 August 2017

ಬೆಳಕು

"ಬೆಳಕು"
--------------
ಊಟಕ್ಕೆ ಕುಳಿತ್ತಿದ್ದೆ
ವಿದ್ಯುತ್ ದೀಪದ
ಭವ್ಯ ಬೆಳಕಿನ ಕೆಳಗೆ
ಒಂದು ರಾತ್ರಿ..
ಹಬ್ಬವೇ ಇರಬೇಕೇನೋ
ಬಗೆಬಗೆಯ ಭಕ್ಷ್ಯಗಳು
ತಟ್ಟೆಯಲ್ಲಿ...
ಇನ್ನೇನು ಕೈಹಾಕಿದೆ
ಅನ್ನುತ್ತಿದ್ದ ಹಾಗೆಯೇ
ಕರೆಂಟ್ ಹೋಗಿಬಿಡಬೇಕೇ
ತಥ್ ಹಾಳಾದ್ದು ಶನಿ!
ಶಪಿಸುತ್ತ ಕಾಯುತ್ತಿದ್ದೆ...
ಹೊಟ್ಟೆಯಲ್ಲೋ ಹಸಿವಿನ
ರುದ್ರ ನರ್ತನ!
'ಹಣತೆಯಾದರೂ
ಹಚ್ಚಿಕೊಳ್ಳೋ ಹುಡುಗಾ'
ಅಂದಿದ್ದಳು
ಬಡಿಸಿದ ಹುಡುಗಿ.
'ಹುಚ್ಚೀ ದೀಪದ
ಕೆಳಗೆ ಕತ್ತಲಿರೋದಿಲ್ಲವೇ
ಅಲ್ಲೇ ನಾನು
ಕುಳಿತಿರೋದು'...
'ಪಾಪ ಕರೆಂಟು ಬರೋ ತನಕ
ಅದು ಹೇಗೆ ಕಾಯುತ್ತೀಯೋ'
ಗೊಣಗುತ್ತ ಎದುರಿಗೆ
ಕುಳಿತಳವಳು-
ಏನೋ ಹವಣಿಕೆಯಲ್ಲಿ...
ಹೃದಯದ ಶುಷ್ಕಕೋಶಕ್ಕೂ
ಕಣ್ಣದೀಪಗಳಿಗೂ
ನರಗಳಿಂದ ಸಂಪರ್ಕಿಸುತ್ತಿದ್ದಾಳೆ
ಅಂದುಕೊಂಡೆ...
ನೋಡಿದಳು ನನ್ನೆಡೆ
ಫಳ್ಳನೆ ಮುಗುಳುನಗೆಯ
ಸ್ವಿಚ್ ಹಾಕಿ...
ಹೌದು
ಬೆಳಕು ಬಂದಿತ್ತು
ಎರಡೂ ದೀಪಗಳಿಂದಲೂ
ಅದು
ಪ್ರೀತಿಯ ಬೆಳಕು
ಮತ್ತೆ ಹೋಗಲಿಲ್ಲ ಅದು,
ನಾವು ಉಂಡು
ಮಲಗುವವರೆಗೆ..!

-ಜಿ.ಎಂ.ನಾಗರಾಜ್.
‌ಹಿರೇಕುಂಬಳಗುಂಟೆ.

ಅನ್ವೇಷಣೆ

"ಅನ್ವೇಷಣೆ"
.....................

ವೇದಗಳಲ್ಲಿ
ಉಪನಿಷತ್ತುಗಳಲ್ಲಿ
ಸ್ಮೃತಿಗಳಲ್ಲಿ
ಪುರಾಣಗಳಲ್ಲಿ
ಆಕೆಯನ್ನು ಹುಡುಕಿದೆ
ಸಿಗಲಿಲ್ಲ

ಬೈಬಲಿನಲ್ಲಿ
ಖುರಾನಿನಲ್ಲಿ
ಚರಿತ್ರೆಯಲ್ಲಿ ವಿಜ್ಞಾನದಲ್ಲಿ
ಖಗೋಳದಲ್ಲಿ ಭೂಗೋಳದಲ್ಲಿ
ತಡಕಾಡಿದೆ ಆಕೆಗೆ
ಸುಳಿವಿರಲಿಲ್ಲ

ಆಚರಣೆಗಳಲ್ಲಿ ದೇಗುಲಗಳಲ್ಲಿ
ಭಜನೆ,ಸ್ತುತಿ ಪ್ರಾರ್ಥನೆಗಳಲ್ಲಿ
ನಂಬಿಕೆ ಮೂಢನಂಬಿಕೆಗಳಲ್ಲಿ
ಕ್ರೌರ್ಯ ಅನಾಚಾರಗಳಲ್ಲಿ
ಆಕೆಯನ್ನು ಅರಸಿದೆ
ದೊರಕಲಿಲ್ಲ

ನಗರಗಳಲ್ಲಿ ಕೊಂಪೆಗಳಲ್ಲಿ
ಗುಡ್ಡಗಳಲ್ಲಿ ಗವಿಗಳಲ್ಲಿ
ಜನಗಳಲ್ಲಿ ಜಾನುವಾರುಗಳಲ್ಲಿ
ಮನುಷ್ಯರಲ್ಲಿ ಮಹಾತ್ಮರಲ್ಲಿ
ಆಕೆಯನ್ನು
ನೋಡಹೋದೆ
ಮೂಡಲಿಲ್ಲ

ಆಕೆಗಾಗಿ
ಮೌನಿಯಾದೆ ಅವಮಾನಿಯಾದೆ
ಜಪಹೇಳಿದೆ ತಪಮಾಡಿದೆ
ಅನ್ನಬಿಟ್ಟೆ ನೀರೂ ಬಿಟ್ಟೆ
ಕೂಗಿದೆ ರೇಗಿದೆ
ಉತ್ತರಿಸಲೇ ಇಲ್ಲ
ಅವಳು

ಕೊನೆಗೆ
ಕಟ್ಟಕಡೆಗೆ ಆಕೆಗಾಗಿ
ಸಾಯಲು ಅಣಿಯಾದೆ
ಅಲ್ಲಿಯಾದರೂ
ಕಂಡಾಳೆಂಬ ಕುಡಿಯಾಸೆ!
ಎದೆಬಡಿದು ಗೋಳಾಡಿದೆ
ಸೋಲಿಗೆ

ಕಿಲಕಿಲ ನಕ್ಕದ್ದು ಕೇಳಿಸಿತು
ಹುಚ್ಚನಂತೆ ಸುತ್ತಲೂ ಅರಸಿದೆ
ಬಾಗಿಲು ತೆರೆದು
ಹೊರಬಂದಳವಳು
ನನ್ನೆದೆಯ ಬಾಗಿಲು
ಆಗಲೇ ನೆನಪಿಸಿಕೊಂಡದ್ದು
ಊರೆಲ್ಲ ಹುಡುಕಿಯೂ
ಮನೆಯಲ್ಲಿ
ಹುಡುಕದೆ ಹೋಗಿದ್ದೆ.
-----------------------*-----------*-----------------------------
ಜಿ.ಎಂ.ನಾಗರಾಜ್
ಹಿರೇಕುಂಬಳಗುಂಟೆ
*****************************************

ಏಕಾಂತೆ


"ಏ-ಕಾಂತೆ"
--------------
ಅವಳು
ನನ್ನ ಹೆಂಡತಿ
ನಾನು
ಅವಳ ಪತಿ
ತುಂಬಾ ಪ್ರೀತಿಸುತ್ತಾಳೆ
ಸಾಯೋವಷ್ಟು
ನಾನೂ ಅಷ್ಟೆ
...ಆಕೆ ಪತಿವ್ರತೆಯೇನೋ
ಅಲ್ಲ; ನನ್ನಂತೆ
ಗಂಡರು ಮಿಂಡರು
ಪ್ರೇಮಿಗಳು ವೈರಿಗಳು
ಆಕೆಗೆ ಇದ್ದಾರೆ
ಆದರೆ ನಮ್ಮ ದಾಂಪತ್ಯಕ್ಕೇನೂ
ಧಕ್ಕೆಯಾಗಿಲ್ಲ
ನಾನು ಕರೆದಾಗ
ಓಡಿಬರುತ್ತಾಳೆ
ಸಾಕೆನಿಸಿ ದೂಡಿದಾಗ
ಹೊರಡುತ್ತಾಳೆ.!
ಅನೈತಿಕವೇನೂ ಅಲ್ಲ
ನಮ್ಮ ಸಂಬಂಧ
ಆದರೆ
ನೋಡಿ ಸಹಿಸದ ಕೆಲವರು
ನನ್ನನ್ನು ಒಂಥರಾ ನೋಡುತ್ತಾರೆ
ಏಕಾಂಗಿ ಎಂದು ಜರಿಯುತ್ತಾರೆ
ನನಗೆ ಗೊತ್ತು
ಪ್ರಪಂಚದ ಮಹಾತ್ಮರಿಗೆಲ್ಲ
ಜ್ಞಾನದ ಬಾಗಿಲು
ತೆರೆದವಳು ಇವಳೇ ಎಂದು.
ಜಡವಲ್ಲ ಆಕೆ
ಕ್ರಿಯಾಶೀಲತೆಗೆ ಸ್ಫೂರ್ತಿ.
ಮೌನಿಯಲ್ಲ
ತಲೆ ತುಂಬಿಸುವಷ್ಟು
ವಾಚಾಳಿ
ಹುಚ್ಚಿಯಲ್ಲ
ವೈಚಾರಿಕತೆಯ ಮೂಲಬಿಂದು
ಕಾಡಿಸುತ್ತಾಳೆ
ಕಠೋರವಾಗಿ
ಒಮ್ಮೊಮ್ಮೆ
ತಾಳಿಕೊಳ್ಳಬೇಕಷ್ಟೆ.

ಚುಂಬಿಸಿ ಕರೆಯುತ್ತೇನೆ
ಅವಳನ್ನು ನಾನು
ಏ ಕಾಂತೆ ಬಾರೇ ಇಲ್ಲಿ
ಸಂಧಿಸಿ ಪ್ರೀತಿಸುವಿರೇನು
ನೀವು ಅವಳನ್ನು
ಏಕಾಂತದಲ್ಲಿ....
*****************************************

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...