Monday 24 January 2022

ನನ್ನೂರ ತೇರು!


 ತೇರನ್ನೇನೋ ಎಳೆದು ನೆಲೆಗೆ ನಿಲ್ಲಿಸಲಾಗಿದೆ.ಅದು ಹುಟ್ಟು ಹಾಕಿದ ಮನಸ್ಸಿನ ತಲ್ಲಣದ ಮೆರವಣಿಗೆ ಮಾತ್ರ ಇನ್ನೂ ನಡೆಯುತ್ತಲೇ ಇದೆ!

ನನ್ನೂರಿನ "ಹಾಲಪ್ಪಜ್ಜನ ಜಾತ್ರೆ" ಯು ಸಂಸ್ಕೃತಿ,ಸಹಬಾಳ್ವೆ , ಸಮೈಕ್ಯತೆಗಳ ಸಂಭ್ರಮವಾಗಿತ್ತಾ? - ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲಿಲ್ಲ.


ಎಳೆಯ ವಯಸ್ಸಿನ ಹುಡುಗರೆಲ್ಲಾ ಕುಡಿದು,ತೂರಾಡುತ್ತ ಕುಣಿದದ್ದು ಸಂಸ್ಕೃತಿಯಾ? ಎಲ್ಲಿ ನೋಡಿದರೂ ಬರೀ ಕುಡುಕರದ್ದೇ ಜಾತ್ರೆ!

ಜಾತಿ ವೈಷಮ್ಯದ ಹೊಗೆಯು ಆವಾಗವಾಗ ಎದ್ದು ಉರಿದದ್ದು ಅದೆಂಥಾ ಸಹಬಾಳ್ವೆ?

ಉಳ್ಳವರಿಗೊಂದು-ಇಲ್ಲದವರಿಗೊಂದು ಬಗೆವ ಈ ಜಾತ್ರೆಯಲ್ಲಿದ್ದದ್ದು ಅದೆಂಥಾ ಸಮೈಕ್ಯತೆ? 

ಆರತಿ ಹಿಡಿದವರ ಸಾಲಲ್ಲಿ ಹಳೆಯದೊಂದು ಸೀರೆಯುಟ್ಟು ಮುದುಡಿ ಕುಳಿತಿದ್ದ ಆ ಬಡಬಾಲೆಯ ಕಣ್ಣನೋಟ...

ಗುಡಿಯೊಳಗೆ ಹೋಗಲಾಗದೆ,ಹೊರಗೆಯೇ ಕೈಮುಗಿದು ಕಣ್ಣಲ್ಲಿ ತೊಟ್ಟಿಕ್ಕಿದ ಕಂಬನಿ ಹನಿಗಳನ್ನೊರೆಸಿಕೊಂಡ ತಳಜಾತಿಯ ಆ ತಾಯಿಯೊಬ್ಬಳ ನಿಟ್ಟುಸಿರು...

ಬಳೆಯಂಗಡಿಯು ಮುಂದೆ ಬರಿಗೈಲಿ ಬಳೆಗಳೆಡೆ ನೋಡುತ್ತ ನಿಂತ ಆ ಸಣ್ಣ ಹುಡುಗಿಯೊಬ್ಬಳ ಎದೆಯ ಕುದಿ...


ದೇಹ-ಮನಸ್ಸುಗಳೆರಡೂ ದಣಿವು,ಜಿಗುಪ್ಸೆಗಳಿಂದ ಕದಡಿ ಹೋಗಿಬಿಟ್ಟಿದೆ.

I wouldn't let myself get into this again..No NOMORE .. NEVER! 

ಮಾರಾಟವಾಗುತ್ತಿರುವ ಬಡವರ ಆಶ್ರಯಮನೆಗಳು!


 ರೈತರ ಸುಗ್ಗಿ ಒತ್ತಟ್ಟಿಗಿರಲಿ..ಈ ಜನಪ್ರತಿನಿಧಿಗಳಿಗಂತೂ ಇದು ಸುಗ್ಗಿಯ ಕಾಲ! ಪಂಚಾಯತಿ ಮೆಂಬರುಗಳಿಂದ ಹಿಡಿದು,ಮಂತ್ರಿ-ಶಾಸಕನವರೆಗೂ ಇರೋ ಬರೋ ಸ್ಕೀಮುಗಳಲ್ಲೆಲ್ಲಾ ದುಡ್ಡು ಬಾಚಿಕೊಳ್ಳುವ 'ಕಟಾವು' ಸಮಯ!

             ಈ ಬಡವರಿಗಾಗಿ ಇರುವ "ವಸತಿ" ಯೋಜನೆಯನ್ನೇ ತೆಗೆದುಕೊಳ್ಳಿ. ಎರಡು ಲಕ್ಷದ ಈ ಸ್ಕೀಮಿಗೆ ಫಲಾನುಭವಿಗಳು,ತಮ್ಮ ಪಂಚಾಯತಿ ಮೆಂಬರುಗಳಿಗೆ ಬರೋಬ್ಬರಿ 30 ರಿಂದ 40 ಸಾವಿರ ಕೊಡಲೇಬೇಕು! ನನ್ನೂರಿನಲ್ಲಂತೂ ಆ ಬಡ ಫಲಾನುಭವಿಗಳು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.ಎಲ್ಲಿಂದ ತರಬೇಕು ಅವರು ಆ ದುಡ್ಡನ್ನು? 

           ಮೊನ್ನೆ ತಾನೇ ಎಮ್ಮೆಲ್ಸಿ ಎಲೆಕ್ಷನ್ನಿನಲ್ಲಿ 60-70 ಸಾವಿರ ಬಾಚಿಕೊಂಡಿದ್ದ ಈ ಪಂಚಾಯತಿ ಮೆಂಬರುಗಳಿಗೆ ಕನಿಷ್ಠ ಮಾನವೀಯತೆ ಇಲ್ಲವೇ? ಜಾತಿ-ಸಮುದಾಯ-ಗುಡಿಗಳ ಹೆಸರಿನಲ್ಲಿ ಅಷ್ಟೋ ಇಷ್ಟೋ ದುಡ್ಡು ಕೊಟ್ಟು , ಒಂದಷ್ಟು ಚಿಲ್ರೆ ಹಂಚಿ,ಎಣ್ಣೆ ,ಕೋಳಿ, ಮಂಡಕ್ಕಿ ಹಂಚಿ ಗೆದ್ದವರಿಗೆ ಈಗ ಬಂಪರ್ ಲಾಭ! ಅಧಿಕಾರಿಗಳೂ ಇವರಿಗೆ ಬೇಕಾದಂತೆ ನಿಯಮಗಳನ್ನು ಮಾಡುತ್ತಲಿದ್ದಾರೆ!

            ಡಾ|| ಎಚ್.ಎಂ.ಎಂ. ಕಂಡಿದ್ದ "ಪಂಚಮುಖೀ ಗ್ರಾಮಾಭ್ಯುದಯ" ದ ಕನಸನ್ನು ನೆನೆದಾಗ ವಿಷಾದವೆನಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಜಿಗುಪ್ಸೆ ಹುಟ್ಟುತ್ತದೆ.

ಬಾಬಾ ಸಾಹೇಬರ ಸಂವಿಧಾನ ಮಾತ್ರ ನಿರ್ಲಿಪ್ತವಾಗಿ ಪಾರ್ಲಿಮೆಂಟಿನಲ್ಲಿ ಭದ್ರವಾಗಿ ಕೂತು,ಸದ್ದಿಲ್ಲದೆ ಅಳುತ್ತಿದೆ!!

ಅಳಲು


 ತೀರಾ....

ನನ್ನಂಥವನೊಬ್ಬನ ಎದೆಯೊಳಗೆ

ಸಂಘರ್ಷ-ಸಾಂತ್ವನ ಎರಡೂ ನೀನೇ! 

ಬಡಿದಾಡಿಸುವುದೂ ನೀನೇ

ಲಲ್ಲೆಗರೆಯುವುದೂ ನೀನೇ

ಕಣ್ಣೀರಿಗೊಡ್ಡುವ ಬೊಗಸೆಯೂ ನಿನ್ನದೇ

ಬಾಯತುಂಬಾ ನಗಿಸುವ ಮಾತೂ ನಿನ್ನದೇ

ನಿದ್ದೆಗೆ ಚುಕ್ಕು ತಟ್ಟುವ ಕೈಯೂ ನಿನ್ನದೇ

ಚಿವುಟಿ ಎಬ್ಬಿಸುವ ಉಗುರೂ ನಿನ್ನದೇ

ಬೆಳಗಿನ ಸೂರ್ಯೋದಯವೂ ನಿನದೇ

ಈಗಿನ ಬೈಗುಗಪ್ಪಿನ ಗೋಧೂಳಿಯೂ ನಿನದೇ

ಪೂರ್ಣ ಚಂದಿರನ ತಂಪು ಹುಣ್ಣಿಮೆಯೂ ನೀನೇ

ಕರಾಳಭೀಕರ ನಿದ್ರೆರಹಿತ ನಿಶೆಯೂ ನೀನೇ

ಇಲ್ಲಿ ಒಡಮೂಡುವ ಪ್ರತೀ ಅಕ್ಷರವೂ ನೀನೇ

ಒಡಮೂಡಿಸುವ ಬೆರಳಿನ ಚೈತನ್ಯವೂ ನೀನೇ

ಹುಟ್ಟು-ಸಾವು,ಬದುಕು-ಭ್ರಮೆಗಳೆಲ್ಲವೂ ನೀನೇ

ರೋಗ-ರುಜಿನ,ಹಸಿವು-ಹತ್ಯೆಗಳೂ ನೀನೇ 

ಸಾಂಗತ್ಯ-ವಿರಹ,ಸುರತ-ವಿರತ ನಿಸ್ಸಂಗತವೂ ನೀನೇ

ಎಲ್ಲದರಲ್ಲಿ ಎಲ್ಲವೂ ಆಗಿ,ಬದುಕು ಮಾಗಿ-ದೇಹ ಬಾಗಿ,

ಕೇಳುವುದೊಂದೇ ನಿನ್ನನು ಕೇಳೋ ದೇವರೇ..

ಸಾವಿಗೂ ಮುನ್ನ ನನ್ನೆದೆಯೊಲವ ಬತ್ತಿಸದಿರು ದೊರೇ!





ಕಟ್ಟೋಣ ಬಾ ಒಂದು ರಾತ್ರಿಯ!


ಕಗ್ಗತ್ತಲ ಬುನಾದಿ ಅಗೆದು,

ಮೌನದ ಇಟ್ಟಿಗೆ ಜೋಡಿಸಿ,

ಕನಸುಗಳ ಕೆಸರು ಕಲೆಸಿ,

ರಾತ್ರಿಯೊಂದನ್ನು ಕಟ್ಟೋಣ ಬಾ...!

ಇಬ್ಬರ ಎದೆಗಳ ಬಾಗಿಲ ನಿಲ್ಲಿಸುವ,

ನನ್ನ-ನಿನ್ನ ಕಂಗಳ ಕಿಟಕಿ ಕೂರಿಸುವ.

ತೋಳ ನಾಗಂದಿಗೆ-ಕೈ ಬೆರಳೇ ಚಿಲಕ!

ಒಳಬರಲಿ ಬಿಡು,ಬಾನ ಚುಕ್ಕಿಯ ಬೆಳಕ!

ಆ ಪೋಲಿ ಚಂದ್ರನನ್ನು ಹೊರಗೆ ದಬ್ಬುವಾ..!

ನೆನಪ ಹೊದೆದು,ಕಾಲವನ್ನು ಬಾಚಿ ತಬ್ಬುವಾ..!



ಗುಳೆಹೋದವರ ಕನಸುಗಳು...


ಬದುಕಿನ ಕನಸುಗಳನರಸಿಕೊಂಡು ಬೆಂಗಳೂರಿನಂಥ ನಗರಗಳೆಡೆಗೆ ನನ್ನೂರು ಸೇರಿದಂತೆ,ಅದೆಷ್ಟೋ ಹಳ್ಳಿಯ ರೈತಾಪಿ ಹುಡುಗರು ಹೆಜ್ಜೆ ಹಾಕಿದ್ದಾರೆ..ಸಣ್ಣ ಸಣ್ಣ ಪೆಟ್ಟಿಗೆಗಳಂಥ ಬಾಡಿಗೆ ಮನೆಗಳಲ್ಲಿ ಬದುಕುತ್ತಾ...ಬರೋ ಸಣ್ಣ ಸಂಬಳಕ್ಕೆ ಹಗಲು ರಾತ್ರಿಗಳಲ್ಲಿ ಯಾವನದ್ದೋ ಉದ್ಧಾರಕ್ಕೆ ದುಡಿಯುತ್ತಾ..ಉಳಿಸಲಿಕ್ಕಾಗುವುದು ಬರೀ PF ದುಡ್ಡು ಮಾತ್ರ ಎಂಬ ಸತ್ಯ ಗೊತ್ತಿದ್ದರೂ...

ಕನಸುಗಳ ಕನವರಿಕೆ ನಡದೇ ಇರುತ್ತದೆ. ಬಿಟ್ಟು ಬಂದ ಹಳ್ಳಿಯ ಬೇರಿನೆಡೆಗೊಂದು ನಿರ್ಲಕ್ಷ್ತವನ್ನು ತಾಳಿ, ನಗರದ ಝಗಮಗ ಬೆರಗಿನ ಬೆಳಕಿಗೆ ಬಲಿಯಾಗುವ ದೀಪದ ಹುಳುಗಳಂತೆ ಇವರ ಕನಸುಗಳೂ ಕೂಡ!

               ಕನಸುಗಳೊಂದಿಗೆ ಆರೋಗ್ಯ, ಆಯಸ್ಸೂ ಕೂಡ ಕರಗಿರುತ್ತದೆ. ಪಡೆದುಕೊಂಡದ್ದೇನು,ಕಳೆದುಕೊಂಡದ್ದೇನು ಎಂಬ ಲೆಕ್ಕಾಚಾರಕ್ಕೆ ಕೂರುವ ವೇಳೆಗೆ, ಕಾಲದ ಪಥ ಬದಲಾಗಿರುತ್ತದೆ...ನಗರವು ಹೊಸ ಬಣ್ಣ ಬಳಿದುಕೊಂಡು,ಅವರನ್ನು ಪರಿಚಯವೇ ಇಲ್ಲವೆಂಬಂತೆ ನಿರುಕಿಸಿ,ಮತ್ತೆ ಹೊಸ ಕನಸು ಹೊತ್ತ ಹೊಸ ತಲೆಮಾರಿನೆಡೆ ಮುಗುಳು ನಗುತ್ತಾ ಕೈ ಚಾಚುತ್ತದೆ!!

             ಹೋದವರು ಮತ್ತೆ ಹಳ್ಳಿಕಡೆ ಬರುವುದು ಮತ್ತೆ ನಗರವು ಇವರನ್ನು ವಿಸರ್ಜಿಸಿದಾಗಲೇ! ಜೀರ್ಣವಾದದ್ದು ವಿಸರ್ಜನೆಯಾಗುವಂತೆ, ವೃದ್ಧಾಪ್ಯದಲ್ಲಿ ಮಕ್ಕಳಿಗೆ ಇವರು ಕೂಳಿಗೆ ಭಾರವೆನಿಸಿದಾಗ! 



 

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...