Thursday 4 April 2024

ಜನ-ಜಾಣತನ


 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ್ಲಿ ಏನಾದರೂ ಕೊಂಡಾಗ ಮಾತ್ರ ಹೇಳಬಲ್ಲ ಅವನು!
ಯಾರಾದರೂ ಟೈಮೆಷ್ಟು ಅಂತ ಕೇಳಿದರೆ, ಜನ ಹೇಳಲಾರದ ಕಾಲವಿದು! ಆಸುಪಾಸು ಯಾರಾದರೂ ಸತ್ತರೂ, ಆ ಕಡೆ ತಿರುಗಿಯೂ ನೋಡದೆ, ಫೇಸ್‌ಬುಕ್‌ ನಲ್ಲಿ ಲೈಕು,RIP ಹಾಕುವವರ ಯುಗ!

ಬೆಳಗ್ಗೆ ಏನ್ ತಿಂದಿದ್ದೆ ಅನ್ನೋದನ್ನೂ ಫೋನ್ ನೋಡಿ ಹೇಳುವ, ದೇಶದ ರಾಜಧಾನಿ ಯಾವುದು ಎಂದರೆ, ಗೂಗಲ್ ಮಾಡುವವರ ಜಮಾನಾ ಇದು!

ನಾವು ಜಾಣರಾಗತ ಇದೇವಾ? ದಡ್ಡರಾಗತ ಇದೇವಾ? ನಮ್ಮ ಜ್ಞಾಪಕಶಕ್ತಿ ನಿರುಪಯುಕ್ತ ಆಗತ ಇದೆಯಾ? 

ಆದರೆ, ನಾವು ಸ್ವಾರ್ಥಿಗಳಾಗತ ಇದೇವೆ,ಸಂಕುಚಿತಗೊಳತಾ ಇದೇವೆ. ಕುತಂತ್ರ-ದಗಾ-ಮೋಸಗಳು ಈಗ ಸಹಜ ಎನ್ನುವಷ್ಟರ ಮಟ್ಟಿಗೆ ಹೊಂದಿಕೊಳತಾ ಹೋಗಿದೇವೆ.

ಅದೆಲ್ಲೋ ಗುಲಾಂ ಆಲಿಯ ಘಜಲ್ ತೇಲಿಬರತಾ ಇದೆ. ಸೂರ್ಯ - ಯಾವುದರ ಪರಿವೆಯಿಲ್ಲದೆ,ಏನನ್ನೂ ನಿರೀಕ್ಷಿಸದೆ, ಸೃಷ್ಟಿ ಸಮಸ್ತದ ದಿನವೊಂದನ್ನು ಮುಗಿಸಿದ ಆ ಸೂರ್ಯ ಪರಮಾತ್ಮ ಪಶ್ಚಿಮದಲ್ಲಿ ವಿಶ್ರಾಂತಿ ಪಡೆಯಲು ಹವಣಿಸುತ್ತಲಿದ್ದರೆ..

ಮನೆ ಮುಂದಿನ ಹುಣಸೇಮರದಲ್ಲಿ ಹಕ್ಕಿಗಳ ಕಲರವ!! ಹೂವು ಅರಳುವ ಸದ್ದು ಅವುಗಳಿಗೆ ಮಾತ್ರವಾ ಕೇಳಿಸುವುದು?

ತೇರು...!


 ಈ ಜಾತ್ರೆಗಳೇ ಹೀಗೆ! ಅಲ್ಲಿ‌ ಬರೀ ತೇರನ್ನು ಮಾತ್ರವಲ್ಲ ಎಳೆಯುವುದು..ಅನೇಕ ಜನರ ಬದುಕಿನ ತೇರನ್ನೂ ಕೂಡ! ಅವು ಬರೀ ಕೊಂಡು ಕೊಳ್ಳುವ ಪರಿಷೆಗಳಲ್ಲ ; ಸಾವಿರ ಭಾವಗಳ,ನಿರ್ಭಾವ-ಸ್ವಭಾವ-ಅಭಾವಗಳ ಮೆಹನತ್ತಿನ ಮೆರವಣಿಗೆ!

ಜಿಲೇಬಿ ಕೊಡಿಸಲಿಕ್ಕೆ ಕಾಸಿಲ್ಲದ ಅಪ್ಪನ ನೋವು, ಆಟಿಕೆ ಕೊಳ್ಳಲಿಕ್ಕಾಗದ ಕಂದನ ಕಂಬನಿ... ಪಾತ್ರೆ ,ಲಟ್ಟಣಿಗೆ,ಕುಂಕುಮದ ಭರಣಿಗಳನ್ನು ಕೊಂಡ ಬಡ ಗೃಹಿಣಿಯ ಸಂಭ್ರಮ...ಎತ್ತುಗಳಿಗೆ ಕೋಡಣಸು,ಗಗ್ಗರ ಕೊಂಡ ರೈತನ ಹಿಗ್ಗು...!!

        ಅಲ್ಲೆಲ್ಲೋ ಕೈಕೈ ಹಿಡಿದು ನಗುತ್ತಾ ತಿರುಗಾಡುವ ಪ್ರೇಮಿಗಳ ನೋಟ..ಚಂದದ ಬಟ್ಟೆ ತೊಟ್ಟ ತರುಣಿಯರ,ತರುಣರ ಹೊಸ ಬೇಟ..! 

ಜಾತ್ರೆಗಳು... ಹೊಸ ಬಂಧಗಳನ್ನು ಬೆಸೆಯುತ್ತವೆ. ನೆನಪುಗಳ ಮೆರವಣಿಗೆಯ ಭಾಗಗಳಾಗಿ ಬದುಕಿಡೀ ಕಿಲಕಿಲ ನಗುತ್ತವೆ!

ಜಾತ್ರೆ ಅಂದರೆ ಬರೀ ದೇವರ ಆರಾಧನೆಯಲ್ಲ. ಅದೊಂದು ಕಾಲದ ಹೊಸ ಮಗ್ಗುಲ ಹೊರಳುವಿಕೆ! ಅಲ್ಲಿ ಎಷ್ಟು ಜನರ ಎದೆಗಳಲ್ಲಿ ನಂದಿಕೋಲುಗಳು ಕುಣಿದಿರುತ್ತವೋ...ಎಷ್ಟು ಹೃದಯಗಳ ಡೋಲು ಬಾರಿಸಿರುತ್ತವೆಯೋ ಯಾರಿಗೆ ಗೊತ್ತು!! ತೇರಿಗೆ ಎಸೆವ ಪ್ರತೀ ಬಾಳೆಹಣ್ಣಿನಲ್ಲೂ ಒಂದೊಂದು ಜೀವದ ಕನಸಿರುತ್ತದೆ. ಒಡೆವ ಪ್ರತೀ ತೆಂಗಿನ ಕಾಯಿಯೂ ಒಂದೊಂದು ಸಂಸಾರದ ತಲ್ಲಣದ ಪ್ರಾರ್ಥನೆ!

Wednesday 3 April 2024

ಸಂಬಂಧಗಳು ಸಂಕೋಲೆಗಳಲ್ಲ - ಜೀವ ಪ್ರೀತಿಯ ಬಂಧಗಳು!


 ಪ್ರೀತಿಯಿಂದ ಸಾಕಿದ ಮಕ್ಕಳು.. ಕಣ್ಣೆದುರಿನಲ್ಲಿಯೇ ಆಸ್ತಿಯನ್ನು ಪಾಲು ಮಾಡಿಕೊಳ್ಳುವ , ಕಟ್ಟಿದ ಮನೆಯನ್ನು ಎರಡಾಗಿ ವಿಭಾಗಿಸಿಕೊಳ್ಳುವ ಕ್ಷಣ ಕೊಟ್ಟಷ್ಟು ಸಂಕಟವನ್ನು... ತಂದೆತಾಯಿಗಳಿಗೆ ಬೇರಾವುದೂ ಕೊಡಲಾರದು!


ಎಷ್ಟೋ ಸಲ ಗಮನಿಸಿದ್ದೇನೆ...ಈ ರಕ್ತಸಂಬಂಧಗಳ ಆಯಸ್ಸು ತೀರಾ ಕಮ್ಮಿ. ದ್ವೇಷದ ಬೆಂಕಿ ಹಬ್ಬುವುದೇ ಅಲ್ಲಿಂದ! ಅದೇ ಯಾರೋ ಎಲ್ಲೋ ಪರಿಚಯವಾದವರೇ ಗಾಢ ಬಂಧ ಬೆಸೆಯುತ್ತಾರೆ.

ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಅರ್ಧಗಂಟೆ ಕಾಲ ಕೂತವರು, ಅರ್ಧ ಜೀವದಷ್ಟು ಪ್ರೀತಿ ಕೊಡುವ ಗೆಳೆಯರಾಗುತ್ತಾರೆ..ಅದೆಲ್ಲೋ ಸಿಕ್ಕ ಜೀವವೊಂದು ಜೀವ ಬಂಧ ಬೆಸೆದುಬಿಡುತ್ತದೆ!


ಈಗ ಸೋಶಿಯಲ್ ಮೀಡಿಯಾ ಜಮಾನ! ಫೇಸ್‌ಬುಕ್‌ ‌ನಲ್ಲಿ ಫ್ರೆಂಡ್ ಆಗಿ, ವಾಟ್ಸಪ್ ಗ್ರೂಪಿನಲ್ಲಿ ಹತ್ತಿರವಾದ ಗೆಳೆತನಗಳೂ ಅಸಂಖ್ಯ ಇರಬಹುದು. ಹಾಗೆನೇ ಸ್ನೇಹದ ಹೆಸರಿನಲ್ಲಿ ಎದೆಗೋ..ಜೇಬಿಗೋ ಕತ್ತರಿ ಹಾಕಿದವರೂ ಇರಬಹುದು! ಇಷ್ಟಕ್ಕೂ ಕರುಳಬಳ್ಳಿಗಳೇ ಕಿಲುಬು ಹಿಡಿದ ಈ ಕಾಲದಲ್ಲಿ ಇದಾದರೂ ಯಾವ ಲೆಕ್ಕದ್ದು!


ನಾವು ಜಗತ್ತಿನಲ್ಲಿ ಬದುಕಬೇಕಿರುವುದು ಸಂಬಂಧಗಳಲ್ಲಿ. ಅದು ರಕ್ತ ಸಂಬಂಧವೇ ಆಗಬೇಕಿಲ್ಲ. ಅದಕ್ಕೆ ಜಾತಿ,ಧರ್ಮದ ಹರಕತ್ತೂ ಇರಬೇಕಿಲ್ಲ. ಹೃದಯದ ಜೊತೆಗೆ ನಿಃಷ್ಕಲ್ಮಶ ಬಾಂಧವ್ಯ ಬೆಸೆವ ಯಾವ ಬಂಧವೇ ಆಗಲಿ..ಅದೇ ಶ್ರೇಷ್ಠ...ಅದೇ ಸಾರ್ಥಕ!


ಬದುಕಿನಲ್ಲಿ ನಿಜದ ಸುಖವಿರುವುದು..ಲಕ್ಷುರಿ ಐಟಮ್ಮುಗಳಲ್ಲಿ ಅಲ್ಲ , ಹಣ-ಆಸ್ತಿಗಳಲ್ಲಿ ಅಲ್ಲ - ಬಾಂಧವ್ಯದಲ್ಲಿ ಸುಖವಿದೆ. ಮನುಷ್ಯ ಪ್ರೀತಿಯಲ್ಲಿ ಸಾರ್ಥಕ್ಯವಿದೆ.

ಇಷ್ಟಕ್ಕೂ ಶ್ರೀಮಂತಿಕೆ ಅಂದರೆ, ಸಂಪತ್ತಲ್ಲ - ಕಷ್ಟ ಬಂದಾಗ ಅದರಿಂದ ಯಾವ ಉಪಯೋಗ ಇಲ್ಲ. ಕಷ್ಟ ಬಂದಾಗ ಅದೆಷ್ಟೋ ಸಲ ಹಣವೂ ಕೆಲಸಕ್ಕೆ ಬಾರದ ಪೇಪರ್ ಆಗುತ್ತದೆ.

 ಆದರೆ ಜೀವಕ್ಕೆ ಜೀವ ಕೊಡುವ 'ಬಾಂಧವ್ಯ' ದೊಡ್ಡದು! 

ಹಾಗಾಗಿ...ಸಂಬಂಧಗಳನ್ನು ಉಳಿಸಿಕೊಳ್ಳಿ. ಗೆಳೆತನವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹರಿದುಕೊಳ್ಳದಿರಿ.

Monday 11 December 2023

ಓಶೋ...ಎಂಬ ಕಾಡುವ ಪೋಲಿ ಮುದುಕ!


 ನ್ನ ಬದುಕಿನ ಪದರುಗಳಲ್ಲಿ ಈ ಪರಮಕೊಳಕ ಮುದುಕ ಬಂದು ಸೇರಿಕೊಂಡು ಹತ್ತಿರ ಹತ್ತಿರ ಇಪ್ಪತ್ತು ಮೂರು ವರ್ಷ! ಪ್ರತಿ ವರ್ಷವೂ ಇಷ್ಟಿಷ್ಟೇ ನನ್ನನ್ನು ಆವರಿಸುತ್ತ ಬಂದು ಈಗ ಪೂರ್ಣಾಹುತಿಯನ್ನಾಗಿಸಿಕೊಂಡ ಅವನ ತಾಕತ್ತಿನ ಬಗೆಗೆ ನನಗಂತೂ ವಿಸ್ಮಯವೆನಿಸಿಬಿಡುತ್ತದೆ...

             

          ಅವನ ತುಂಟ ಕಣ್ಣುಗಳು,ಅವನ ಬೆಳ್ಳಿಯ ಬಣ್ಣದ ಗಡ್ಡ , ತಲೆಗೆ ಸುತ್ತಿದ ಢಾಕ ಮಸ್ಲಿನ್ ಟರ್ಬನ್ನು , ಆಳದಲ್ಲೆಲ್ಲೋ ಅರ್ಥ ಮಡುಗಟ್ಟಿದಂತೆ ಕಾಣುವ ಅವನ ತಣ್ಣನೆಯ ನಗು...ಅವನಿಗೆ ಸೋಲಲು ಯಾರಿಗಾದರೂ ಇಷ್ಟು ಸಾಕು.

      

      ...ಆದರೆ, ನನಗೆ ಹುಚ್ಚು ಹಿಡಿಸಿದ್ದು ಅವನ ಧ್ವನಿ! ಆ ಧ್ವನಿಗೆ ಎಂತಹ ಕಲ್ಲನ್ನಾದರೂ ಒಪ್ಪಿಸಿಬಿಡಬಲ್ಲ ಅಸಲಿ ತಾಕತ್ತಿದೆಯೇನೋ ಅನಿಸುತ್ತದೆ.

       

        ಎಷ್ಟೋ ಸಲ..ನನಗೂ ಇವನಿಂದ ರೇಜಿಗೆ ಹುಟ್ಟಿ , ಇನ್ನು ಈ ಬೋಳಿಮಗನ ಸಾವಾಸ ಸಾಕು ಅನಿಸಿದ್ದಿದೆ.ಅವಾಗ ದೂರ ಮಾಡಲೆತ್ನಿಸಿದಷ್ಟೂ ಹತ್ತಿರವಾಗುವ ಅವನ "ಪ್ರಭಾವಳಿ" ಗೆ ನಾನೇ ಬೆರಗಾಗಿದ್ದೇನೆ.

           ಅವನು ಮಾತನಾಡದ,ಬರೆಯದ ವಿಷಯಗಳಿಲ್ಲ. ಕೆಮಿಷ್ಟ್ರೀಯಿಂದ ಹಿಡಿದು ಕೆಮ್ಮಿನ ತನಕ, ಪಾರಲೌಕಿಕದಿಂದ ಹಿಡಿದು ಪ್ಯಾರಲಿಸಿಸ್ ತನಕ ಹೇಳಿದ್ದಾನೆ.ಅವನ ಚಿಂತನೆಯ ಧಾಟಿಯೇ ಅನನ್ಯ!


ಅವನು ಯಾವ ಸುಡುಗಾಡು "ಇಸಂ" ಅನ್ನು ಪ್ರತಿಪಾದಿಸಲಿಲ್ಲ.ಇರುವ ಯಾವ ಇಸಂ ಗಳನ್ನು ಅಲ್ಲಗಳೆಯಲೂ ಇಲ್ಲ. ಎಲ್ಲವುಗಳ ಮಧ್ಯೆ ಒಂದು ತಾದಾತ್ಮ್ಯಕತೆಯನ್ನು ನಿರ್ಮಿಸುತ್ತ ಹೋದ.

ಸೆಕ್ಸು ,ಲವ್ವುಗಳ ಬಗ್ಗೆ ಬರೆದದ್ದಕ್ಕೇ ಜನ ಅವನನ್ನು ಸೆಕ್ಸ್ ಗುರು ಅಂದರು.ಬರೋಬ್ಬರಿ ಮೂವತ್ತಕ್ಕೂ ಹೆಚ್ಚಿನ ದೇಶಗಳು ಅವನನ್ನು ನಿರ್ಬಂಧಿಸಿದ್ದವು.ಸುಮಾರು ಕೇಸುಗಳು ಅವನ ಮೇಲಿದ್ದವು.ಅವನು ಬಾಯಿ ತೆರೆಯುವುದನ್ನೇ ಮಾಧ್ಯಮಗಳು ಕಾದಿದ್ದು ,ಅವನು ಹೇಳಿದ್ದನ್ನೆಲ್ಲವನ್ನೂ ವಿವಾದಗಳನ್ನಾಗಿಸುತ್ತಿದ್ದವು.


...ಆದರೆ, ಅವನು ಇವುಗಳಿಗೆ ಕ್ಯಾರೇ ಅನ್ನದೆ ತನ್ನದೇ ಬದುಕನ್ನು ಬದುಕಿಬಿಟ್ಟ. ಬದುಕಿದ ಅಷ್ಟೂ ಕ್ಷಣಗಳನ್ನೂ ತನಗಾಗಿ ಎತ್ತಿಟ್ಟುಕೊಂಡ.ಯಾವ ಭಿಡೆಗಳನ್ನೂ ಇಟ್ಟುಕೊಳ್ಳಲಿಲ್ಲ.ಯಾವ ಫಾಲೋವರುಗಳಿಗೂ ಹೀಗೇ ಬದುಕಿ ಅಂತ ಬೋಧಿಸೋಕೆ ಹೋಗಲಿಲ್ಲ.


ಹೌದು.."ಮೋಹನ ಚಂದ್ರ ಜೈನ್" ಆಲಿಯಾಸ್ "ಓಶೋ" ನ ಜನ್ಮದಿನ ಇವತ್ತು! ಅವನು ಸತ್ತು ಮೂವತ್ತು ಮೂರು ವರ್ಷಗಳಾದರೂ ಇನ್ನೂ ಅವನು ನನ್ನಂತಹ ಸಾವಿರ ಸಾವಿರ ಜನಗಳ ಒಳತೋಟಿಗಳನ್ನು ಮೀಟುತ್ತ ಬದುಕಿಯೇ ಇದ್ದಾನೆ!


ಅವನ ಬಗ್ಗೆ ಬರೆಯಬೇಕೆಂದು ನಾನು ಮಾಡಿಕೊಂಡ ಟಿಪ್ಪಣಿಗಳು ಲೀಪುಗಟ್ಟಲೆ ಇವೆ. ಅದ್ಯಾವಾಗ ಬರೆಯುತ್ತೇನೋ ಏನೋ!! 

Tuesday 24 October 2023

ವ್ಯಂಗ್ಯ ಮಾಡಬೇಡಿ - ಭಾರತಾಂಬೆಯನ್ನು!!

 ದಲಾವಣೆ..ಕಾಲದ ಗುಣ! ಪ್ರತೀಕ್ಷಣವೂ ನಮ್ಮ ದೇಹವು ಬದಲಾದಂತೆ,ಮಾಗಿದಂತೆ ನಮ್ಮ ದೇಶವೂ ಬದಲಾಗುತ್ತಿರುತ್ತದೆ..ಮಾಗುತ್ತಿರುತ್ತದೆ.

ಬದಲಾವಣೆಗೆ ಸಮಾಜವೊಂದು ಒಡ್ಡಿಕೊಂಡ


ಸಂದರ್ಭದಲ್ಲಿ ನೆಲೆಯನ್ನೂ,ನೆಲವನ್ನೂ ಕಳೆದುಕೊಳ್ಳುತ್ತಿರುವ ಕಷ್ಟಕುಲದವರನ್ನು ನಾವು ಅರ್ಥಮಾಡಿಕೊಳ್ಳದೇ ಹೋದರೆ,ನಮ್ಮೂರು ನಮಗೆ ಅರ್ಥವಾಗುವುದಿಲ್ಲ.ಹಳ್ಳಿಗಳು ಅರ್ಥವಾಗದೆ ಭಾರತವೂ ಅರ್ಥವಾಗುವುದಿಲ್ಲ..!

ಹಾಗಾಗಿಯೇ ಈ "ಗ್ಯಾರೆಂಟೀ"ಗಳು, ಶ್ರಮಿಕ ವರ್ಗದವರನ್ನು ಸೆಳೆದದ್ದು. 


ಮಲ್ಯ ,ನೀರವ್ ಮೋದಿ,ಚೋಕ್ಸಿಯಂಥವರ ಸಾವಿರಾರು ಕೋಟಿಗಳ ಉಂಡೆನಾಮದ ಬಗ್ಗೆಯೂ ಮಾತಾಡಬೇಕು. ಅದಾನಿ,ಅಂಬಾನಿಯವರ ದಿಢೀರನೆ ಸಂಪತ್ತು ಹೆಚ್ಚಿದ್ದರ ಬಗ್ಗೆಯೂ..!


ಇರಲಿ ಬಿಡಿ.. ದೇಶದ ಸಂಪತ್ತನ್ನು ಬಡವರೂ ಕೆಲಕಾಲ ತಿನ್ನಲಿ. ಅದು ಬಿಟ್ಟಿ ,ಪುಕ್ಸಟ್ಟೆ ಅಂದುಕೊಂಡವರ ಸಂವೇದನೆ ಸತ್ತಿದೆ ಅಷ್ಟೇ.

ಈ ಮರ, ಮಾರಕವಾದ ಕಾರ್ಬನ್ ಡೈಆಕ್ಸೈಡ್ ಹೀರಿ,ನಮ್ಮ ಜೀವ ವಾಯುವಾದ ಆಕ್ಸಿಜನ್ ಕೊಟ್ಟಂತೆ, ಸರಕಾರಗಳೂ ಕೂಡ,ಉಳ್ಳವರ ಸಂಪತ್ತಿನ ಕೆಲ ಭಾಗವನ್ನು ಇಲ್ಲದವರಿಗೆ ಹಂಚಬೇಕು. ಅದೇ "ಸಮಾಜವಾದ"! ವಾಸ್ತವವಾಗಿ ಅತೀ ಹೆಚ್ಚು ದುಡಿಯುವುದು ಸಮಾಜದ ತಳಶ್ರೇಣಿಯೇ! ಸರ್ಕಾರದ ಸವಲತ್ತುಗಳನ್ನು ಅನುಭವಿಸುವುದು ಮಾತ್ರ ಕಾರ್ಪೊರೇಟ್ ಧಣಿಗಳಾಗಬೇಕೇಕೆ! ನೆನಪಿಡಿ..ಈ ಭಾರತದ ಭೂಮಿಗೆ ಸುರಿವ ಬಡವರ ಬೆವರಿನ ಪ್ರತೀ ಹನಿಯೂ..ಅವನು ಕಟ್ಟುವ ಟ್ಯಾಕ್ಸ್!

ನಮ್ಮ ತಿಳುವಳಿಕೆಗಳೂ ಸಹ ಅಪ ಡೇಟ್ ಆಗಬೇಕಾದುದೂ ಹೀಗೆಯೇ! 


ಅನ್ನಭಾಗ್ಯವನ್ನು ಕೇವಲವಾಗಿ ಕಾಣಬೇಡಿ. ಫ್ರೀಯಾಗಿ ಕೆಂಪು ಬಸ್ ಹತ್ತುವುದು ತಾಯಿ ಭಾರತಾಂಬೆ! ವ್ಯಂಗ್ಯ ಮಾಡಬೇಡಿ. 

ರಾಜಕಾರಣ... ನಮ್ಮ ಮನುಷ್ಯತ್ವವನ್ನು ನಾಶ ಮಾಡುವಂತಾಗಬಾರದು!

Wednesday 20 September 2023

ಕಲ್ಲೂ ನೀರು ಕರಗುವ ಹೊತ್ತಿನಲ್ಲಿ...


 ಒಬ್ಬ ವ್ಯಕ್ತಿಯನ್ನು ಹೇಗೆಲ್ಲಾ ಕೊಲ್ಲಬಹುದು? ಯೋಚೆನೆಗೆ ಬೀಳುತ್ತೇನೆ. ಹೇಗೆಲ್ಲಾ ವಂಚಿಸಬಹುದು?..ತಲ್ಲಣಿಸಿಹೋಗಿದ್ದೇನೆ! ಬದುಕಿನಲ್ಲಿ ನಾನು ಅನೇಕ ಸಲ ವಂಚನೆಗೊಳಗಾಗಿದ್ದೇನೆ.ದಗಾ ಹಾಕಿಸಿಕೊಂಡಿದ್ದೇನೆ. ಅದು ದುಡ್ಡಿನದ್ದು! ಈ ವಂಚನೆಗಳಿಗೂ ಅದೆಷ್ಟೋ ಮುಖಗಳಿರುತ್ತವಂತೆ! 

ನನ್ನ ಭಾವಕೋಶದ ನವಿರು ಸಂವೇದನೆಯೊಂದು ನಿನ್ನೆ ಸತ್ತುಬಿಟ್ಟಿತು. ಮೂರು ಹಿಡಿ ಮಣ್ಣು ಹಾಕಿ,ಹೂತು ಬಿಟ್ಟರು! ಮತ್ತೆಂದೂ ಅದಕ್ಕೆ ಜೀವ ಬರಲಾರದು! ಈ ಎದೆಯೀಗ ಅಕ್ಷರಶಃ ಮರುಭೂಮಿ! ಇಲ್ಲೀಗ ಯಾವ ಹಸಿರೂ ಇಲ್ಲ. 
         ಉಫ್......ಈ ಜಗತ್ತು..ಜನ..ಬಂಧ..ಅನುಬಂಧ.. ಯಾವುದೂ ಬೇಡವೆನಿಸಿಬಿಟ್ಟಿದೆ. ತುಂಬಾ ತಿರುಗಾಡುತ್ತಿದ್ದವನು ನಾನು, ಅಷ್ಟೇ ತೀವ್ರವಾಗಿ ಏಕಾಂಗಿತನದ ಸುಖವನ್ನೂ ನೋಡಿದವನು! 
ಬದುಕು ಮುರಕೊಂಡು ಬಿದ್ದಿದೆ. ಕನಸುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿವೆ. ಇನ್ನೆಷ್ಟು ಹೊತ್ತು ಬೇಕು ಅವು ಬೆಂಕಿಗೋ ಬಿಸಿಲಿಗೋ ಒಣಗಿ ಸಾಯಲಿಕ್ಕೆ? 
ಉಂಡದ್ದು ಯಾವಾಗೋ ನೆನಪಿಲ್ಲ..ಉಂಡರೆ ತೀರುವ ಹಸಿವೂ ಅದಲ್ಲ.
ಈ ಬಿವಕಾಸಿ ಬದುಕಿಗೆ ಇನ್ನು ಅದೆಷ್ಟು ದಿನದ ಆಯಸ್ಸು? ಲೆಕ್ಕ ಹಾಕುತ್ತಲಿದೆ ಕಾಲ! ನಕ್ಷತ್ರವೂಂದು ಅಲ್ಲೇ ಪಕ್ಕದಲ್ಲಿದೆ.
ನೀಲಿ ಆಗಸವೀಗ ಕಪ್ಪಾಗಿದೆ..ಅದರೊಡಲಿನ ಕಂಬನಿಯ ಊಟೆ ಯಾವಾಗ ಒಡೆಯಲಿಕ್ಕಿದೆಯೋ ಗೊತ್ತಿಲ್ಲ. ನೀಲಿ ಸಮುದ್ರದಲ್ಲೂ ಪ್ರಕ್ಷುಬ್ಧತೆಯ ಅಲೆಗಳೆದ್ದಿವೆ.ಅದರಲ್ಲೀಗ ಯಾವ ಮುತ್ತೂ ಇಲ್ಲ.
ನನ್ನ ದೈನೇಸೀತನಕ್ಕೆ ಆ ಹುಣಸೇಮರದ ಕುಂಟಗುಬ್ಬಿಯೂ ಮರುಗುತ್ತಲಿದೆ. ಈ ಕಲ್ಲೂ ನೀರೂ ಕರಗುವ ರಾತ್ರಿ ಹೊತ್ತಿನಲ್ಲಿ... ನಾನೇ ಇಡಿಯಾಗಿ ಕರಗುತ್ತಲಿದ್ದೇನೆ!

Tuesday 5 September 2023

"ಇರವಂಜಿ" ನದಿಯಲ್ಲಿ ಹುಟ್ಟಿದ ಪ್ರೀತಿಯ ಪ್ರವಾಹ!!


 

ಕೆಲವೊಂದು ಸಿನಿಮಾಗಳು, ಇಡೀ ಮನಸ್ಸನ್ನು ಆವರಿಸಿಬಿಡುತ್ತವೆ. ಬಹುಕಾಲ ಕಾಡುತ್ತಲೇ ಇರುತ್ತವೆ. ತಲ್ಲಣಗಳನ್ನು ಎಬ್ಬಿಸಿ,ಆಳವನ್ನು ತಾಕುತ್ರವೆ.

ನಾನು ತುಂಬಾ ಹಚ್ಚಿಕೊಂಡು ನೋಡುವುದು ಬಹುತೇಕ ಇರಾನಿ ಸಿನಿಮಾಗಳನ್ನೇ! ಆವಾಗವಾಗ ಭಾರತೀಯ ಸಿನಿಮಾಗಳನ್ನೂ ಇಷ್ಟಪಟ್ಟು ನೋಡುತ್ತೇನೆ. ಮಲಯಾಳಂ ಸಿನಿಮಾಗಳೂ ತುಂಬಾ ಚಂದ ಇರುತ್ತವೆ. ಕಮರ್ಷಿಯಲ್ ಎಲಿಮೆಂಟುಗಳಿಲ್ಲದ,ಹಿರೋಯಿಸಂ ಇಲ್ಲದ, ಸ್ಕ್ರಿಪ್ಟೇ ಪ್ರಧಾನವಾದ ಸಿನಿಮಾಗಳು ಇಷ್ಟವಾಗುತ್ತವೆ.

ಎಷ್ಟು ಜನ ಪ್ರತಿಭಾವಂತ ನಟರಿದ್ದಾರೆ..ಮಲಯಾಳಂನಲ್ಲಿ! ಮುಮ್ಮಟ್ಟಿ , ಮೋಹನ್, ದಲ್ಕೀರ್ ಸಲ್ಮಾನ್,ಫಹಾದ್ ಫಾಸಿಲ್, ಪೃತ್ವಿರಾಜ್...!
ಮೊನ್ನೆ.. Hotstar ನಲ್ಲಿ  ನೋಡಿದ "ಎನ್ ನಿಂಡೆ ಮೊಯುದೀನ್" ಎಂಬ ಚಂದದ ಸಿನಿಮಾ ಬಗ್ಗೆ ಬರೆಯಬೇಕು ಅನಿಸುತ್ತಿದೆ.
ಇಡೀ ಸಿನಿಮಾ ; ಸತ್ಯ ಘಟನೆಯನ್ನಾಧರಿಸಿದ್ದು.
  1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ನಡೆದದ್ದು! ಅಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಮತ್ತು ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಎಂಬ ಈ ಜೋಡಿ ಹಕ್ಕಿಗಳ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ. Offcoz ಅದು ಲವ್ ಜಿಹಾದ್ ಅಲ್ಲ,  ಶುದ್ಧ ಪ್ರೀತಿ. ಪರಸ್ಪರ ಪ್ರೀತಿಯೇ ಅವರ ಜೀವನ ಆಗಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ಇಬ್ಬರದ್ದು ರೆಬೆಲ್ ಪರ್ಸನಾಲಿಟಿ..
    ಪ್ರೀತಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿ 'ಹಿಂದೂ-ಮುಸ್ಲಿಂ' ಪ್ರೀತಿಯನ್ನು ಯಾರಾದರೂ ಒಪ್ಪಿಯಾರೇ?  ಕಾಲೇಜು ಕಲೀತಿದ್ದ ಕಾಂಚನಮಾಲಾಗೆ ಗೃಹಬಂಧನದ ಶಿಕ್ಷೆ.. ತನ್ನ ಆಪ್ತ ಮಿತ್ರನ ಮಗಳನ್ನೇ ಪ್ರೀತಿಸಿದ ಕಾರಣಕ್ಕೆ ಮೊಯ್ದಿನ್ ನ  ಮುಂಗೋಪಿ ಅಪ್ಪ ತನ್ನ ಕರುಳ ಕುಡಿಯನ್ನೇ ಗುಂಡಿಕ್ಕಿ ಕೊಲ್ಲಲು ಪ್ರಯತ್ನ ಮಾಡಿದ್ದ. ಮತ್ತೊಮ್ಮೆ ಮಗನನ್ನು 22 ಬಾರಿ ಇರಿದು ಸೀದಾ ಪೊಲೀಸ್ ಠಾಣೆಗೆ ಹೋದ ಮೊಯ್ದಿನ್ ಅಪ್ಪ, 'ಮಗನನ್ನು ನಾನೇ ಕೊಂದೆ' ಅಂತ ಶರಣಾಗಿದ್ದ. ಮೊಯ್ದಿನ್ ಪವಾಡದ ರೀತಿ ಬದುಕುಳಿದಿದ್ದ. "ನನಗ್ಯಾರು ಇರಿದಿಲ್ಲ, ನಾನೇ ಬಿದ್ದು ಗಾಯಗೊಂಡೆ" ಎಂದು ಕೋರ್ಟ್ ಕಟಕಟೆಯಲ್ಲಿ ಸುಳ್ಳು ಹೇಳಿ ಶಿಕ್ಷೆಯಿಂದ ಅಪ್ಪನನ್ನು ಪಾರು ಮಾಡಿದ್ದ. 'ನನ್ನನ್ನು ಕೊಂದರೂ ನಮ್ಮ ಪ್ರೀತಿ ಸಾಯಲ್ಲ' ಎಂದು ಹಠ ಹಿಡಿದಿದ್ದ ಮೊಯ್ದಿನ್ ಕೊನೆಗೆ ಹುಟ್ಟಿದ  ಮನೆಯಿಂದಲೇ ಹೊರದಬ್ಬಲ್ಪಟ್ಟಿದ್ದ.
  ಉಲ್ಲಾಟಿಲ್ ಉನ್ನಿ ಮೊಯ್ದಿನ್ ಸಾಹೇಬರ ಮಗ ಮೊಯ್ದಿನ್ ಹಾಗೂ ಕೊಟ್ಟಂಗಲ್ ಅಚ್ಯುತನ್ ಅವರ ಮಗಳು ಕಾಂಚನಮಾಲಾ ಮಧ್ಯೆ ಪ್ರೀತಿಗೆ ಕಿಚ್ಚು ಹಚ್ಚಿದ್ದು ಮುಕ್ಕಂನಲ್ಲಿ ಹರಿಯುವ ಇರುವಂಜಿ ನದಿ. ಈ ನದಿ ದಂಡೆಯಲ್ಲಿ ಪ್ರೇಮ ಹಕ್ಕಿಗಳು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖಾಮುಖಿಯಾದಾಗ ಕಣ್ಣುಗಳೇ ಮಾತಾಡಿ ನಿಟ್ಟುಸಿರು ಬಿಟ್ಟಿದ್ದವು. 'ಇರುವಂಜಿಪುಝ  ಹರಿದು ಅರಬ್ಬಿ ಸಮುದ್ರವನ್ನು ಸೇರುವ ಹಾಗೆ ನಾವು ಒಂದು ದಿನ ಜೊತೆಯಾಗಿ ಬಾಳೋದು ಸತ್ಯ' ಎಂದು ಮೊಯ್ದಿನ್ ಮಾತು ಕೊಟ್ಟಿದ್ದ. ಕಾಂಚನಾಳ ಈ ಸುದೀರ್ಘ ಗೃಹ ಬಂಧನದ ಸಮಯದಲ್ಲಿ ಇಬ್ಬರ ಮಧ್ಯೆ ಪತ್ರ ವ್ಯವಹಾರ ಮಾತ್ರ ನಡೀತಿತ್ತು. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತನ್ನ ಪ್ರೇಮ ಪತ್ರಕ್ಕೆ ಹೊಸ ಲಿಪಿ ಕಂಡುಹಿಡಿದಿದ್ದಳು ಕಾಂಚನ. ಈ ಜಗತ್ತಿನಲ್ಲಿ ಮೊಯ್ದಿನ್ ಮತ್ತು ಕಾಂಚನಾಳಿಗೆ ಮಾತ್ರ ಓದೋಕೆ ಬರೆಯೋಕೆ ಸಾಧ್ಯವಿರುವ ಲಿಪಿ ಅದು.
   ಇರುವಂಜಿ ನದಿ ಹರಿದು ಸಮುದ್ರ ಸೇರಲು ಒಂದಷ್ಟು ದಿನಗಳಾಗುತ್ತೆ ಅಂತ ನಂಬಿಕೊಂಡಿದ್ದ ಈ ಜೋಡಿ ಕಾಯುವಿಕೆಯನ್ನೂ ಪ್ರೀತಿಸಿದ್ದರು. ಪ್ರೀತಿಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಸಿಟ್ಟಲ್ಲಿ ಈಗಿನ ಜಮಾನದವರಂತೆ  ಓಡಿಹೋಗಲಿಲ್ಲ. ಎರಡು ದಶಕಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕುಳಿತರು. ಆದರೆ ಹೆತ್ತವರ ಮನಸು ಬದಲಾಗಲಿಲ್ಲ. 'ಹುಡುಗಿ ಇಸ್ಲಾಮಿಗೆ ಮತಾಂತರವಾದರೆ ಓಕೆ' ಎಂಬ ಅಂತಿಮ ಆಯ್ಕೆಯ ಸಂದೇಶ ಅಪ್ಪನ ಕಡೆಯಿಂದ ಬಂದಾಗ "ಆಕೆ ಮತಾಂತರವಾದ ಕ್ಷಣವೇ ನನ್ನ ಪ್ರೀತಿ ಅಂತ್ಯಗೊಳ್ಳುತ್ತೆ" ಎಂಬ ಉದಾತ್ತ ಧರ್ಮ ಸಹಿಷ್ಣುತೆಯ ಸಂದೇಶ ಮೊಯ್ದಿನ್ ಕಡೆಯಿಂದ ರವಾನೆಯಾಗಿತ್ತು.
    ಅಪ್ಪ ಕಟ್ಟಾ ಕಾಂಗ್ರೆಸ್ಸಿಗನಾದರೂ ಮಗ ಮೊಯ್ದಿನ್ ಪಕ್ಕಾ ಸೋಷಿಯಲಿಸ್ಟ್. ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮೂಗು ಮುಟ್ಟೋಕೂ ಸಾಧ್ಯವಿಲ್ಲ ಎಂದು ಅಪ್ಪ‌ ಮೂದಲಿಸಿದಾಗ ಮುಕ್ಕಂನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸಂಘಟಿಸಿ ಕಾಂಗ್ರೆಸಿಗರೇ ಮೂಗು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಮೊಯ್ದಿನ್ ಹೆಗ್ಗಳಿಕೆ. ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಮೊಯ್ದಿನ್ ಜನಪ್ರತಿನಿಧಿಯೂ ಆಗಿದ್ದ.
     ಮುಕ್ಕಂ ಮಣ್ಣಿನ ಅಪತ್ಬಾಂದವನಾಗಿದ್ದ ಮೊಯ್ದಿನ್ ಬಹುಮುಖ ಪ್ರತಿಭೆ. ಪತ್ರಕರ್ತ, ಛಾಯಗ್ರಾಹಕ, ಲೇಖಕ, ಪ್ರಕಾಶಕ, ನಿರ್ದೇಶಕ, ನಿರ್ಮಾಪಕ, ಜನನಾಯಕ.. ಉತ್ತಮ ಫುಟ್ಬಾಲ್ ಆಟಗಾರ, ನುರಿತ ಈಜುಗಾರ, ಆಟಗಾರ-ಓಟಗಾರ, ಖಡಕ್ ಹೋರಾಟಗಾರ. ಮುಕ್ಕಂನ ಸಮಸ್ಯೆಗೆ ಪರಿಹಾರ ಬೇಕಾದರೆ ಅಲ್ಲಿ ಮೊಯ್ದಿನ್ ಇರಲೇಬೇಕಿತ್ತು. "ಕೇರಳದ ಹುಡುಗಿಯರು ಪ್ರೀತಿ ಮಾಡಿ ಓಡಿಹೋಗಲು ಕಾರಣಾಗಿರುವ ನಟ", ಕೇರಳಿಯರ ನೆಚ್ಚಿನ ಸಿನಿಮಾ ಹೀರೋ ಪೃಥ್ವಿರಾಜ್ ಗೂ ಈ ಮೊಯ್ದಿನೇ ರಿಯಲ್ ಹೀರೋ.
   60 ದಶಕದ ಪ್ರೀತಿ 80ರ ದಶಕವನ್ನು ದಾಟಿತ್ತು. ದಿನಗಳು ಊರುಳುತ್ತಾನೇ ಇತ್ತು. ಗೃಹಬಂಧನದಲ್ಲಿದ್ದ ಕಾಂಚನ,, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೊಯ್ದಿನ್.. ಇಬ್ಬರ ವಯಸ್ಸು 40ರ ಗಡಿ ದಾಟಿತ್ತು. ಆದರೆ ಪರಸ್ಪರ ಪ್ರೀತಿ ಚೂರು ಕಡಿಮೆಯಾಗಿರಲಿಲ್ಲ. ದೂರದಲ್ಲೇ ಇದ್ದು ಗಾಢವಾಗಿ ಪ್ರೀತಿಸುತ್ತಲೇ ಇದ್ದರು.
    1982ರ ಮಳೆಗಾಲದ ಸಮಯ. ಆ ದಿನ ಮುಕ್ಕಂನಲ್ಲಿ ಮಳೆಯ ಆರ್ಭಟ ಜೋರಿತ್ತು. ಇರುವಂಜಿ ನದಿಯ ನೀರಿನ ಮಟ್ಟ ಕೂಡ ಏರಿತ್ತು. 10 ಜನರ ಕೆಪಾಸಿಟಿ ಇರುವ ದೋಣಿಯಲ್ಲಿ 30 ಮಂದಿ ತೂರಿಕೊಂಡಿದ್ದರು. ಮುಂದಾಗುವ ಅನಾಹುತದ ಸುಳಿವು ಯಾರಿಗೂ ಇರಲಿಲ್ಲ. ನದಿದಂಡೆಯಿಂದ ಹತ್ತಿಪ್ಪತ್ತು ಮೀಟರ್ ದೂರ ಸಾಗುತ್ತಿದ್ದಂತೆ ದೋಣಿ ಮಗುಚಿ ಬಿತ್ತು. ಮುಕ್ಕಂ‌ನ ಆಪತ್ಬಾಂದವ ಮೊಯ್ದಿನ್ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಮುಳುಗುತ್ತಿದ್ದವರ ರಕ್ಷಣೆಗೆ ಧುಮುಕಿದ್ದ. ಆಳಕ್ಕೆ ಹೋಗಿ ಒಬ್ಬರನ್ನೇ ಎಳೆದುತಂದು ದಡ ಮುಟ್ಟಿಸುತ್ತಿದ್ದ.  "ನನ್ನ ಬಗ್ಗೆ ಚಿಂತೆ ಬಿಡಿ, ಬೇರೆಯವರನ್ನು ನೋಡಿಕೊಳ್ಳಿ" ಎಂದು ಹೇಳಿ ಕೊನೆಯದಾಗಿ ಆಳಕ್ಕೆ ಹೋದ ಮೊಯ್ದಿನ್ ಮರಳಿ ಬರಲೇ ಇಲ್ಲ. ಆಳದಲ್ಲಿದ್ದ ನೀರಿನ ಸುಳಿ ಮೊಯ್ದಿನ್ ಎಂಬ ಪುಣ್ಯಾತ್ಮನನ್ನು ಬಲಿ ಪಡೆದಿತ್ತು. ಸಮಾಜಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟಿದ್ದ ಮೊಯ್ದಿನ್ ಬೇರೆಯವರ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದ. ಮೂರು ದಿನಗಳ ಬಳಿಕ ಶವ ಮೇಲೆ ಬಂದಾಗಲೂ ಮುಕ್ಕಂನ ಕಣ್ಣೀರು ಕೊನೆಯಾಗಿರಲಿಲ್ಲ. ಮಳೆಯ ರೂಪದಲ್ಲಿ ಕಣ್ಣೀರು ಸುರಿಸುತ್ತ ಆ ವಿಧಿ ಕೂಡ  ಪಶ್ಚಾತಾಪ ಪಟ್ಟಿತ್ತು. ಆ ಕಾಲದಲ್ಲಿ ಮುಕ್ಕಂನ ಮಣ್ಣಿನಲ್ಲಿ ನಿಂತು ಇಂದಿರಾ ಗಾಂಧಿಯವರ ನೀತಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಮೊಯ್ದಿನ್ ಗೆ 1983ರಲ್ಲಿ ಇಂದಿರಾ ಗಾಂಧಿಯ ಸರ್ಕಾರವೇ ಮರಣೋತ್ತರ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿತ್ತು.
     ಪ್ರಿಯಕರನ ಸಾವಿನ ಸುದ್ದಿ ಕೇಳಿ  ಕುಸಿದು ಹೋಗಿದ್ದ ಕಾಂಚನಾಳಿಗೆ, ಮೊಯ್ದಿನ್ ಮುಖ ನೋಡಬೇಕೆಂಬ ಕೊನೆ ಆಸೆಯೂ ಈಡೇರಲಿಲ್ಲ. ಮೊಯ್ದಿನ್ ಸಮಾಧಿಯಾಗುವುದರ ಜೊತೆಯಲ್ಲೇ ಅಪ್ಪಟ ಪ್ರೀತಿಯೊಂದಕ್ಕೆ ಗೋರಿ ಕಟ್ಟಲಾಯಿತು. ಮೊಯ್ದಿನ್ ಇಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಯಾವ ಆಸೆಯೂ ಕಾಂಚನಾಳಿಗೆ ಇರಲಿಲ್ಲ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮನೆಯವರು ತಡೆಯಾದರು. ಆರನೇ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿ ಕಣ್ಣುಬಿಟ್ಟಾಗ ಕಾಂಚನಾಳ ಮುಂದೆ ಮೊಯ್ದಿನ್ ತಾಯಿ ನಿಂತಿದ್ದರು. ಮೊಯ್ದಿನ್-ಕಾಂಚನ ಮದುವೆಯಾಗದಿದ್ದರೂ ಹಿಂದೂ ಹುಡುಗಿಯನ್ನು ವಿಧವಾ ಸೊಸೆಯಾಗಿ ಸ್ವೀಕರಿಸಿದಳು ಮೊಯ್ದಿನ್ ಉಮ್ಮ. ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಕಾಂಚನ, ಮೃತ ಪ್ರಿಯಕರನ ಮನೆ ಸೇರಿಕೊಂಡಳು. ಹಿಂದೂವಾಗಿದ್ದುಕೊಂಡೇ ಮುಸ್ಲಿಂ ಮನೆಯಲ್ಲಿ ಹೊಸ ಜೀವನ ಶುರು ಮಾಡಿದಳು.
     79 ವರ್ಷ ವಯಸ್ಸಿನ ಕಾಂಚನ ಅಮ್ಮ, ಮೊಯ್ದಿನ್ ಎಂಬ ಅಮರ ಪ್ರೇಮಿಯ ನೆನಪಲ್ಲಿ ಈಗಲೂ ಅದೇ ಮನೆಯಲ್ಲಿದ್ದಾರೆ. ಮುಕ್ಕಂನ ಮಳೆಯಲಿ ನೆನೆಯುತ್ತ, ಇರುವಂಜಿ ನದಿ ದಂಡೆಯಲ್ಲಿ ವಿಹರಿಸುತ್ತ, ಖಬರಸ್ಥಾನದಲ್ಲಿ ಮೊಯ್ದಿನ್ ಸಮಾಧಿ ಸಂದರ್ಶನ ಮಾಡುತ್ತ, ತಮ್ಮ ಪ್ರೀತಿಯನ್ನು ಜೀವಂತವಾಗಿಟ್ಟಿದ್ದಾರೆ ದೇವರ ನಾಡಿನ ಬ್ಯಾಚುಲರ್ ವಿಧವೆ ಕಾಂಚನಮಾಲಾ.
      ಹೌದು... ಸರಿಯಾಗಿ 37 ವರ್ಷಗಳ ಹಿಂದೆ ಇದೇ ದಿನದಂದು ಇರುವಂಜಿ ನದಿ ಮೊಯ್ದಿನ್ ಎಂಬ ಮಹಾತ್ಮನನ್ನು ಬಲಿ ಪಡೆದಿತ್ತು. ಮೊಯ್ದಿನ್ ಈ ಜಗತ್ತಿನಲ್ಲಿ ಇಲ್ಲದಿದ್ದರೂ ಆತನ ಪ್ರೀತಿ ಇವತ್ತಿಗೂ ಅಮರ. ಮೊಯ್ದಿನ್ ಹುಟ್ಟಿ ಬೆಳೆದಿದ್ದ ಮನೆ ಈಗ ಮೊಯ್ದಿನ್ ಸೇವಾ ಮಂದಿರವಾಗಿ ಬದಲಾಗಿದೆ. ತನ್ನ ಮನೆಯನ್ನು ಮೊಯ್ದಿನ್ ತಾಯಿ ವಿಧವಾ ಸೊಸೆಗೆ ಕೊಟ್ಟು ನಿರ್ಗಮಿಸಿದ್ದರು. ಹಿರಿಯ ಜೀವ ಕಾಂಚನ ಅಮ್ನ ಸೇವಾ ಮಂದಿರದ ಮೂಲಕ ಮೊಯ್ದಿನ್ ಅರ್ಧದಲ್ಲಿ ಬಿಟ್ಟುಹೋಗಿದ್ದ ಕನಸುಗಳನ್ನು ಪೂರ್ತಿ ಮಾಡುತ್ತಿದ್ದಾರೆ.
       "ಜಲಂ ಕೊಂಡು ಮುರಿವೇಟಲ್" (ನೀರಿನಿಂದ ಆಗಿರುವ ಗಾಯ) ಹೆಸರಿನ ಡಾಕ್ಯುಮೆಂಟರಿ ಮೂಲಕ ಈ ಅಮರ ಪ್ರೇಮ ಕತೆಯನ್ನು 2006ರಲ್ಲಿ ಜಗತ್ತಿಗೆ ಪರಿಚಯಿಸಿದ ಕೇರಳದ ಪತ್ರಕರ್ತ ವಿಮಲ್, 2015ರಲ್ಲಿ ಇದೇ ರಿಯಲ್ ಸ್ಟೋರಿಯನ್ನು "ಎನ್ನುಂ ನಿಂಡೆ ಮೊಯ್ದಿನ್"( ಎಂದಿಗೂ ನಿನ್ನ ಮೊಯ್ದಿನ್) ಹೆಸರಿನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತಂದಿದ್ದರು.
ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ನಟನೆಯ ಈ ಚಿತ್ರ ಮಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಅಬ್ಬರ ಮಾಡಿತ್ತು. ಈ ಸಿನಿಮಾದ 'ಮುಕ್ಕತ್ತೆ ಪೆಣ್ಣೆ' ಹಾಡು ಪ್ರೇಮಿಗಳ ಪಾಲಿಗೆ ಪವಿತ್ರ ಗೀತೆ..
ಅಮರ ಪ್ರೇಮ ಅಂದರೆ ರೋಮಿಯೋ-ಜೂಲಿಯೆಟ್,, ಲೈಲಾ- ಮಜ್ನು, ಸಲೀಂ-ಅನಾರ್ಕಲಿ ಅಂತ ಜಗತ್ತು ನೆನಪು ಮಾಡಕೊಳ್ಳಬಹುದು. ಆದ್ರೆ ಕೇರಳಕ್ಕೆ ಮಾತ್ರ ಮೊಯ್ದಿನ್- ಕಾಂಚನ..!

ಆ ಕೇರಳದ " ಇರವಂಜಿ" ನದಿಯ ಪ್ರೀತಿಯ ಹರಿವು..ಇನ್ನೂ ನಿಂತಿಲ್ಲ. ಹರಿಯುತ್ತಲೇ ಇದೆ. ಇಷ್ಟು ದಿನ ನನ್ನ ಎದೆಯಲ್ಲಿ.. ಮತ್ತು ಇನ್ನುಮುಂದೆ ಇದನ್ನು ಓದಿದ ನಿಮ್ಮಗಳ ಎದೆಯಲ್ಲಿ!!

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...