Wednesday 3 April 2024

ಸಂಬಂಧಗಳು ಸಂಕೋಲೆಗಳಲ್ಲ - ಜೀವ ಪ್ರೀತಿಯ ಬಂಧಗಳು!


 ಪ್ರೀತಿಯಿಂದ ಸಾಕಿದ ಮಕ್ಕಳು.. ಕಣ್ಣೆದುರಿನಲ್ಲಿಯೇ ಆಸ್ತಿಯನ್ನು ಪಾಲು ಮಾಡಿಕೊಳ್ಳುವ , ಕಟ್ಟಿದ ಮನೆಯನ್ನು ಎರಡಾಗಿ ವಿಭಾಗಿಸಿಕೊಳ್ಳುವ ಕ್ಷಣ ಕೊಟ್ಟಷ್ಟು ಸಂಕಟವನ್ನು... ತಂದೆತಾಯಿಗಳಿಗೆ ಬೇರಾವುದೂ ಕೊಡಲಾರದು!


ಎಷ್ಟೋ ಸಲ ಗಮನಿಸಿದ್ದೇನೆ...ಈ ರಕ್ತಸಂಬಂಧಗಳ ಆಯಸ್ಸು ತೀರಾ ಕಮ್ಮಿ. ದ್ವೇಷದ ಬೆಂಕಿ ಹಬ್ಬುವುದೇ ಅಲ್ಲಿಂದ! ಅದೇ ಯಾರೋ ಎಲ್ಲೋ ಪರಿಚಯವಾದವರೇ ಗಾಢ ಬಂಧ ಬೆಸೆಯುತ್ತಾರೆ.

ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಅರ್ಧಗಂಟೆ ಕಾಲ ಕೂತವರು, ಅರ್ಧ ಜೀವದಷ್ಟು ಪ್ರೀತಿ ಕೊಡುವ ಗೆಳೆಯರಾಗುತ್ತಾರೆ..ಅದೆಲ್ಲೋ ಸಿಕ್ಕ ಜೀವವೊಂದು ಜೀವ ಬಂಧ ಬೆಸೆದುಬಿಡುತ್ತದೆ!


ಈಗ ಸೋಶಿಯಲ್ ಮೀಡಿಯಾ ಜಮಾನ! ಫೇಸ್‌ಬುಕ್‌ ‌ನಲ್ಲಿ ಫ್ರೆಂಡ್ ಆಗಿ, ವಾಟ್ಸಪ್ ಗ್ರೂಪಿನಲ್ಲಿ ಹತ್ತಿರವಾದ ಗೆಳೆತನಗಳೂ ಅಸಂಖ್ಯ ಇರಬಹುದು. ಹಾಗೆನೇ ಸ್ನೇಹದ ಹೆಸರಿನಲ್ಲಿ ಎದೆಗೋ..ಜೇಬಿಗೋ ಕತ್ತರಿ ಹಾಕಿದವರೂ ಇರಬಹುದು! ಇಷ್ಟಕ್ಕೂ ಕರುಳಬಳ್ಳಿಗಳೇ ಕಿಲುಬು ಹಿಡಿದ ಈ ಕಾಲದಲ್ಲಿ ಇದಾದರೂ ಯಾವ ಲೆಕ್ಕದ್ದು!


ನಾವು ಜಗತ್ತಿನಲ್ಲಿ ಬದುಕಬೇಕಿರುವುದು ಸಂಬಂಧಗಳಲ್ಲಿ. ಅದು ರಕ್ತ ಸಂಬಂಧವೇ ಆಗಬೇಕಿಲ್ಲ. ಅದಕ್ಕೆ ಜಾತಿ,ಧರ್ಮದ ಹರಕತ್ತೂ ಇರಬೇಕಿಲ್ಲ. ಹೃದಯದ ಜೊತೆಗೆ ನಿಃಷ್ಕಲ್ಮಶ ಬಾಂಧವ್ಯ ಬೆಸೆವ ಯಾವ ಬಂಧವೇ ಆಗಲಿ..ಅದೇ ಶ್ರೇಷ್ಠ...ಅದೇ ಸಾರ್ಥಕ!


ಬದುಕಿನಲ್ಲಿ ನಿಜದ ಸುಖವಿರುವುದು..ಲಕ್ಷುರಿ ಐಟಮ್ಮುಗಳಲ್ಲಿ ಅಲ್ಲ , ಹಣ-ಆಸ್ತಿಗಳಲ್ಲಿ ಅಲ್ಲ - ಬಾಂಧವ್ಯದಲ್ಲಿ ಸುಖವಿದೆ. ಮನುಷ್ಯ ಪ್ರೀತಿಯಲ್ಲಿ ಸಾರ್ಥಕ್ಯವಿದೆ.

ಇಷ್ಟಕ್ಕೂ ಶ್ರೀಮಂತಿಕೆ ಅಂದರೆ, ಸಂಪತ್ತಲ್ಲ - ಕಷ್ಟ ಬಂದಾಗ ಅದರಿಂದ ಯಾವ ಉಪಯೋಗ ಇಲ್ಲ. ಕಷ್ಟ ಬಂದಾಗ ಅದೆಷ್ಟೋ ಸಲ ಹಣವೂ ಕೆಲಸಕ್ಕೆ ಬಾರದ ಪೇಪರ್ ಆಗುತ್ತದೆ.

 ಆದರೆ ಜೀವಕ್ಕೆ ಜೀವ ಕೊಡುವ 'ಬಾಂಧವ್ಯ' ದೊಡ್ಡದು! 

ಹಾಗಾಗಿ...ಸಂಬಂಧಗಳನ್ನು ಉಳಿಸಿಕೊಳ್ಳಿ. ಗೆಳೆತನವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹರಿದುಕೊಳ್ಳದಿರಿ.

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...