Tuesday 8 August 2017

ಅನ್ವೇಷಣೆ

"ಅನ್ವೇಷಣೆ"
.....................

ವೇದಗಳಲ್ಲಿ
ಉಪನಿಷತ್ತುಗಳಲ್ಲಿ
ಸ್ಮೃತಿಗಳಲ್ಲಿ
ಪುರಾಣಗಳಲ್ಲಿ
ಆಕೆಯನ್ನು ಹುಡುಕಿದೆ
ಸಿಗಲಿಲ್ಲ

ಬೈಬಲಿನಲ್ಲಿ
ಖುರಾನಿನಲ್ಲಿ
ಚರಿತ್ರೆಯಲ್ಲಿ ವಿಜ್ಞಾನದಲ್ಲಿ
ಖಗೋಳದಲ್ಲಿ ಭೂಗೋಳದಲ್ಲಿ
ತಡಕಾಡಿದೆ ಆಕೆಗೆ
ಸುಳಿವಿರಲಿಲ್ಲ

ಆಚರಣೆಗಳಲ್ಲಿ ದೇಗುಲಗಳಲ್ಲಿ
ಭಜನೆ,ಸ್ತುತಿ ಪ್ರಾರ್ಥನೆಗಳಲ್ಲಿ
ನಂಬಿಕೆ ಮೂಢನಂಬಿಕೆಗಳಲ್ಲಿ
ಕ್ರೌರ್ಯ ಅನಾಚಾರಗಳಲ್ಲಿ
ಆಕೆಯನ್ನು ಅರಸಿದೆ
ದೊರಕಲಿಲ್ಲ

ನಗರಗಳಲ್ಲಿ ಕೊಂಪೆಗಳಲ್ಲಿ
ಗುಡ್ಡಗಳಲ್ಲಿ ಗವಿಗಳಲ್ಲಿ
ಜನಗಳಲ್ಲಿ ಜಾನುವಾರುಗಳಲ್ಲಿ
ಮನುಷ್ಯರಲ್ಲಿ ಮಹಾತ್ಮರಲ್ಲಿ
ಆಕೆಯನ್ನು
ನೋಡಹೋದೆ
ಮೂಡಲಿಲ್ಲ

ಆಕೆಗಾಗಿ
ಮೌನಿಯಾದೆ ಅವಮಾನಿಯಾದೆ
ಜಪಹೇಳಿದೆ ತಪಮಾಡಿದೆ
ಅನ್ನಬಿಟ್ಟೆ ನೀರೂ ಬಿಟ್ಟೆ
ಕೂಗಿದೆ ರೇಗಿದೆ
ಉತ್ತರಿಸಲೇ ಇಲ್ಲ
ಅವಳು

ಕೊನೆಗೆ
ಕಟ್ಟಕಡೆಗೆ ಆಕೆಗಾಗಿ
ಸಾಯಲು ಅಣಿಯಾದೆ
ಅಲ್ಲಿಯಾದರೂ
ಕಂಡಾಳೆಂಬ ಕುಡಿಯಾಸೆ!
ಎದೆಬಡಿದು ಗೋಳಾಡಿದೆ
ಸೋಲಿಗೆ

ಕಿಲಕಿಲ ನಕ್ಕದ್ದು ಕೇಳಿಸಿತು
ಹುಚ್ಚನಂತೆ ಸುತ್ತಲೂ ಅರಸಿದೆ
ಬಾಗಿಲು ತೆರೆದು
ಹೊರಬಂದಳವಳು
ನನ್ನೆದೆಯ ಬಾಗಿಲು
ಆಗಲೇ ನೆನಪಿಸಿಕೊಂಡದ್ದು
ಊರೆಲ್ಲ ಹುಡುಕಿಯೂ
ಮನೆಯಲ್ಲಿ
ಹುಡುಕದೆ ಹೋಗಿದ್ದೆ.
-----------------------*-----------*-----------------------------
ಜಿ.ಎಂ.ನಾಗರಾಜ್
ಹಿರೇಕುಂಬಳಗುಂಟೆ
*****************************************

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...