Saturday 3 April 2021

ಕುಂಟಗುಬ್ಬಿಗೊಂದು ಕಡೆಯ ಮಾತು..


 ಇಷ್ಟೂ ದಿನ ನಡೆದು ಸವೆಸಿದ ಹಾದಿಯಲ್ಲಿ

ನಾನು ಹೆಜ್ಜೆಗಳನ್ನೇನೂ ಮೂಡಿಸಲಿಲ್ಲ ಮುಸಾಫಿರಾ..
ಮೂಡಿದ ಗುರುತು ಅಳಿಸಿದ್ದು ಕಣ್ಣೀರಿನ ಮಳೆಯೇ!
ನನ್ನ ಅವ್ಯಕ್ತ ಜಗತ್ತಿನಲ್ಲಿ ಬೆಳಕಿಲ್ಲ..ಬೇಕಾಗೂ ಇಲ್ಲ!
ಕಣ್ಣೀರ ಜೊತೆ ನೋವ ಬೆರೆಸಿ ಉಣ್ಣಲು ಕತ್ತಲೇ ಸಾಕು.

ಬದುಕಿನ ಆಸೆಗಳಿಗಳಿಗೆಲ್ಲ ಗೋರಿ ಕಟ್ಟಿದ್ದೇನೆ ಫನಾ
ನೀನು ಕೊಟ್ಟ ಅವತ್ತಿನ ಕೆಂಪು ದಾಸವಾಳ ಅಲ್ಲೆ ಮೇಲಿದೆ!
ನನ್ನ ಆಗಸದಲ್ಲೀಗ ಚುಕ್ಕಿಗಳೂ ಇಲ್ಲ ,ನಿತ್ಯ ಗ್ರಹಣದ ತಮಸ್ಸು!
ಅಲ್ಲೆಲ್ಲೋ ಕೂಗುವ ಗೂಬೆಯೊಂದರ ದನಿಯೇ ಜೀವಚೈತನ್ಯ!
ಸಾವಿನೂರಿನ ದಾರಿಯಲ್ಲಿ ಬೀಸುಗಾಲಿನ ಹೆಜ್ಜೆ..ತೇಕು ಬಂದರೂ..

ಆ ಹುಣಸೇಮರದ ಕುಂಟಗುಬ್ಬಿಗೊಮ್ಮೆ ಹೇಳಿಬಿಡು;
ನನ್ನ ಬದುಕ ಬಟ್ಟಲ ಜೀವದ್ರವ್ಯ ತೀರಿತೆಂದು..
ಎದೆಗೂಡಿಗಿದ್ದ ಏಕಬಾಗಿಲು ಮುಚ್ಚಿಹೋಗಿತೆಂದು!
ಅದರ ವಿಕಟ ಕೂಗು ಕೇಳಬೇಕಿತ್ತೊಮ್ಮೆ ಕಡೆಯದಾಗಿ,
ಮುರಿದ ರೆಕ್ಕೆಯ ಮೇಲಿನ ನನ್ನ ದಸ್ಕತ್ ಅಳಿಸಬೇಕಿತ್ತು!
ಆಡದೆ ಸತ್ತ ಮಾತುಗಳ ಗಂಟೊಂದು ಬಳಿಯಿಡಬೇಕಿತ್ತು.




No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...