Friday, 21 December 2018

"ನಾನಿಲ್ಲ"

ಹೆಪ್ಪುಗಟ್ಟಿದೆ ಚಿತ್ತ
ಮೇಲೆಲ್ಲ ಬೆಳೆದ ಹುತ್ತ
ನೆಲವು ಮೌನವ ತಬ್ಬಿ
ಮುಗಿಲು ನನ್ನೆದೆಗೆ ಹಬ್ಬಿ
ಕಾಲ ಕೂಡಾ..ಸ್ವಲ್ಪ ಕಾಲ,
ಕುಳಿತು ಮಲಗಿದ ಘಳಿಗೆ...
ನಾನಿಲ್ಲ ನನ್ನಯ ಒಳಗೆ..

Thursday, 20 December 2018

ಹುಚ್ಚು ಖೋಡಿ ಮನಸು -೧೩

ಮುಗಿಲ ಎದೆಯಲ್ಲಿ ತಲೆಯನಿಟ್ಟು
ಭೋರೆಂದು ಅಳಬೇಕೆನಿಸಿತ್ತು..
ಕರಿಮೋಡವೊಂದು ನನಗೆ ಮರುಗಿ
ಕಂಬನಿಯ ತುಂತುರು ಹನಿಸಿತ್ತು..

ನನ್ನ ಗೋರಿ ನಾನೇ ಬಗೆದು
ಅಲ್ಲೇ ತಣ್ಣಗೆ ಮಲಗಬೇಕೆನಿಸಿತ್ತು..
ನೀನಿಲ್ಲದ ಜೀವ-ಜೀವನ ಸಾಕೆನಿಸಿತ್ತು.
ಸತ್ತ ಕನಸುಗಳ ಹೆಣ..ಕೊಳೆತು ನಾರುತ್ತಿತ್ತು

ಇಷ್ಟು ದಿನಗಳ ಕಾಲ ನೀನಿಲ್ಲದ ಬದುಕು
ಸವೆಸಿದ್ದಕ್ಕೆ , ನನ್ನ ಮೇಲೆಯೇ ಜಿಗುಪ್ಸೆ!

 ಹೋಗಲಿ ಬಿಡು ಬಂಗಾರ...
ನೀ ಬಿಟ್ಟುಹೋದ ನೆನಪುಗಳನ್ನೇ
ನೆಟ್ಟು ನೀರೆರೆದು,ಬೆಳೆಸಿ, ಅದರ ಬುಡದಲ್ಲೇ
ಕೊನೆಯ ಕನಸ ಹೂ ಅರಳಿಸುತ್ತೇನೆ.
ಈ ಜಲುಮಕ್ಕೆ ಅಷ್ಟು ಸಾಕು ಬಿಡು!

ಕನವರಿಸಿತ್ತು ನೋಡು ಅರ್ಧಜೀವದ ಕನಸು
ಏನಂದೀತು ಕೇಳು ನಿನ್ನ ಹುಚ್ಚು ಖೋಡಿ ಮನಸು!



Friday, 12 October 2018

ರೈತನೂ ಮತ್ತು ಮಳೆ ಅಂಬೋ ಮಳೆಯೂ...

"ಯಾತಕ್ಕೆ ಮಳೆ ಹೋದವೋ
ಶಿವ ಶಿವ ಲೋಕ ತಲ್ಲಣಿಸುತಾವೋ
ಬೇಕಿಲ್ಲದಿದ್ದರೆ ಬೆಂಕೀಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ?  

ಹಸುಗೂಸು ಹಸಿವೀಗೆ ತಾಳದೆಲೇ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತೀಗೆ ಅನ್ನಾವು ಇಲ್ಲದೆಲೆ
ಏರುತಾವೋ ಮೊಳಕೈಗೆ ಬಳೆ

ಹೊಟ್ಟೆಗೆ ಅನ್ನ ಇಲ್ಲದೆಲೇ
ನಡೆದರೆ ಜೋಲಿ ಹೊಡೆಯುತಲೇ
ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದೆಲೆ

ಒಕ್ಕಲು ಮಕ್ಕಳಂತೆ,ಅವರಿಗೆ ಬಿಕ್ಕಲಿಕೆ ತ್ರಾಣಿಲ್ಲವೋ
ಮುಕ್ಕೋಟಿ ಜನಗಳಿಗೆ ಅನ್ನವ ಇಕ್ಕಲಿಕೆ
ಮುಕ್ಕಣ್ಣ ಮಳೆಯ ಸುರಿಸೋ...


ಮೇಲಿನ ಜನಪದದಲ್ಲಿನ ಘೋರ ದೃಶ್ಯಕ್ಕೂ ಕೂಡ್ಲಿಗಿ ಹಾಗೂ ಬಯಲುಸೀಮೆಯ ಹಲವಾರು ತಾಲೂಕುಗಳ ಪ್ರಸಕ್ತ ಪರಿಸ್ಥಿತಿಗೂ ಅಂತಹ ವ್ಯತ್ಯಾಸಗಳಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ!

ಇಲ್ಲಿನ ರೈತಾಪಿ ಜನ,ಈ ವರ್ಷದ ಮುಂಗಾರು ಮಳೆಯ ಮೇಲೆ ಭರವಸೆ ಇಟ್ಟು ಬಿತ್ತಿದ ಬೀಜಗಳೆಲ್ಲ ಗೇಣುದ್ದ ಬೆಳೆಯುತ್ತಲೇ ಮಳೆ ಇಲ್ಲದೇ ಪೂರ್ಣ ಒಣಗಿ ಹೋಗಿವೆ. ಸಾಲ ಸೋಲ ಮಾಡಿ ರಸಗೊಬ್ಬರ ಹಾಕಿ,ಕಳೆನಾಶಕ ಹೊಡೆದು ಹಸುಕಂದನಂತೆ ಕಾಪಾಡಿದ ಬೆಳೆಯು ಕಣ್ಣೆದುರಲ್ಲೇ ಒಣಗಿ ನಿಂತಿದೆ.
ಮೆಕ್ಕೆ ಜೋಳ,ಸೇಂಗಾ,ರಾಗಿ....
.....ಎಲ್ಲವೂ ಒಣಗಿವೆ!..ರೈತ ಸಂಕುಲದ ಭರವಸೆ ಕೂಡ!!

ಕಪ್ಪೆ ಮದುವೆ,ಕತ್ತೆ ಮದುವೆ ಎಲ್ಲಾ ಮಾಡಿದ್ದಾಯ್ತು..ತನ್ನ ತಿಥಿ ಮಾತ್ರ ಬಿಟ್ಟು. ನಿಷ್ಪಾಪಿ ರೈತನಿಗೆ ದೇವರೂ ಕೈ ಎತ್ತಿಬಿಟ್ಟ ನೋಡಿ! ಇನ್ನು ಈ ಸರಕಾರಗಳದ್ದು ಯಾವ ಸುಡುಗಾಡು ಲೆಕ್ಕ!

ಇದರ ಜೊತೆಗೆ ತಾಲೂಕಿನ ಹಳ್ಳಿಗಳನ್ನು ಡೆಂಗ್ಯು , ಟೈಫಾಯಿಡ್,ಚಿಕನ್ ಗುನ್ಯಗಳೂ ಹೊಕ್ಕಿವೆ. ಸರಕಾರಿ ಆಸ್ಪತ್ರೆಗಳು ವೈದ್ಯರು ನರ್ಸುಗಳು ರಣಹದ್ದುಗಳಂತೆ ರೈತರ ಚಕ್ಕಳ ದೇಹಗಳನ್ನು ಕುಕ್ಕಿ ತಿನ್ನುತ್ತಿದ್ದಾರೆ.

ರಾಜಕಾರಣಿಗಳ ಬಾಲಂಗೋಚಿಗಳಿಗೆ,ಪುಢಾರಿಗಳಿಗೆ ಮಾತ್ರವೇ ಮೊನ್ನೆ ಮೊನ್ನೆಯ ಸಾಲಮನ್ನ ಭಾಗ್ಯ ದಕ್ಕಿದೆ.ಸಾಮಾನ್ಯ ರೈತನಿಗೆ ಅಂಥ ಸೊಸೈಟಿ,ಬ್ಯಾಂಕುಗಳಲ್ಲಿ ಸಾಲವಾದರೂ ಹೇಗೆ ಹುಟ್ಟೀತು?
ಬರಪೀಡಿತ ಎಂದು ಘೋಷಿಸಿದರೂ ರೈತನಿಗೆ ಸಿಗುವುದಾದರೂ ಎಷ್ಟು? ಓಡಾಟದ ಖರ್ಚು,ಅಧಿಕಾರಿಗಳ ಲಂಚ ಕೊಟ್ಟು...ಅಬ್ಬಬ್ಬ ಅಂದರೆ ಎರಡು ಪ್ಲೇಟ್ ಒಗ್ಗರಣೆ ತಿನ್ನಬಹುದಾದಷ್ಟು!

ರೈತ ತಲೆ ಮೇಲೆ ಕೈ ಹೊತ್ತು ಕೂತಿದ್ದಾನೆ.ವಾರದಲ್ಲೇ ಹಿರಿಯ ಹಬ್ಬ "ಮಾರ್ಲೋಮಿ" ಇದೆ.ಮಾಡಿದ ಸಾಲಗಳು,ಮಕ್ಕಳ ಮದುವೆ......ದೃಷ್ಟಿ ಮಾತ್ರ ಮೋಡಗಳತ್ತ.!

ಇಂಥದ್ದೊಂದು ಅಸಹಾಯಕ,ಅಸಹಿಷ್ಣಕ,ದೈನೇಸೀ ಪರಿಸ್ಥಿತಿಯ ಯಾವ ಮಾಧ್ಯಮಗಳೂ ತಲೆಕೆಡಿಸಿಕೊಳ್ಳೋದಿಲ್ಲ ಬಿಡಿ.ನ್ಯೂಸ್ ಚಾನೆಲ್ಲುಗಳು ಯಾವನೋ ನಟನ ಎರಡನೆಯವಳೋ ಮೂರನೆಯವಳೋ ಹೆಂಡತಿಯನ್ನು ಗಂಟೆಗಟ್ಟಲೆ ಸ್ಟುಡಿಯೋದಲ್ಲಿ ಕೂರಿಸಿಕೊಂಡು ನಿನ್ನ ಗಂಡನಿಗೆ ತಲೆ ಮಟನ್ ಅಂದರೆ ಭಾಳ ಇಷ್ಟನಾ ಅನ್ನುವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿವೆ.ಅದು ಅವರ ಟಿ.ಆರ್.ಪಿ.ಬಿಡಿ!
ಮುದ್ರಣ ಮಾಧ್ಯಮಗಳು ಮೋದಿ ಹಂಗೆ,ಕಾಂಗ್ರೆಸ್ ಹಿಂಗೆ,ಸೆಕ್ಯುಲರ್ರು ಫ್ಯಾಸಿಸಂ ಎನ್ನುವ ಸುಡುಗಾಡು ವಿಷಯಗಳ ಬಗ್ಗೆ ಲೀಪುಗಟ್ಟಲೆ ಬರೆಯುತ್ತಿವೆ..off course ಅದು ಅವುಗಳ ಸರ್ಕುಲೇಶನ್ ವಿಷಯ ಬಿಡಿ! ಬಿಸಿನೆಸ್ಸು ನ ಪದರದಲ್ಲಿ "ಅಕ್ಷರ ಹಾದರ" ಮಾಡುವ ಅವರಿಗೂ ರೈತ ಸೇಲಬಲ್ ಐಟಮ್ಮೇ ಅಲ್ಲವಲ್ಲ!

ಇನ್ನು ಕವಿಗಳು,ವಿಚಾರವಾದಿಗಳು ಅಸಹಷ್ಣಿತೆ,ಅರಾಜಕತೆ ಎಂದೆಲ್ಲ ಬರೆದು,ವದರಿ ತಮಗೆ ಕೊಟ್ಟಂತಹ ಪ್ರಶಸ್ತಿಯ ತಗಡಿನ ಫಲಕಗಳನ್ನು(ದುಡ್ಡಲ್ಲ!?) ಸರಕಾರಕ್ಕೆ ವಾಪಸ್ ಮಾಡುತ್ತಿದ್ದಾರೆ!
ಇವರಿಗೆ ಹಳ್ಳಿಗಳಲ್ಲಿನ ಅಸಹಷ್ಣಿತೆ,ಅಸಹಾಯಕತೆಗಳು ಕಣ್ಣಿಗೆ ಅಪ್ಪಿತಪ್ಪಿಯೂ ಬೀಳಲಾರವು..ಹಾಗಾಗಿ ಅವರೆಲ್ಲ ಮೋದಿಯ ವಿರುದ್ಧವೋ ಪರವೋ ಬರೆದುಕೊಂಡು ಬರೋದನ್ನ ಪಡೆದುಕೊಳ್ಳುವುದರಲ್ಲಿ ಮುಳುಗಿದ್ದಾರೆ.

ರೈತನಿಗೆ ತನ್ನ ಬದುಕಿನ ಅಸಹಷ್ಣಿತೆ,ಅಸಹಾಯಕತೆಯ ವಿರುದ್ಧ ಪ್ರತಿಭಟಿಸಿ ಸರಕಾರಕ್ಕೆ ವಾಪಾಸ್ ನೀಡಲು ಯಾವ ಪ್ರಶಸ್ತಿಗಳೂ ಇಲ್ಲವಲ್ಲ!..ಇರೋದು ಒಂದೇ; ಅದು ತನ್ನ ಜೀವ! ಅದನ್ನೇ ನೀಡುತ್ತಾನೆ.!
ಪತ್ರಿಕೆಗಳಲ್ಲಿ ಯಾವುದೋ ಮೂಲೆಯಲ್ಲಿ "ಸಾಲಬಾಧೆ-ರೈತ ನೇಣಿಗೆ ಶರಣು" ಎಂಬ ಸಿಂಗಲ್ ಕಾಲಂ ಸುದ್ದಿ ಬರಬಹುದಷ್ಟೇ!
ಅದಿರಲಿ, ರೈತನ ಆತ್ಮಹತ್ಯೆಯನ್ನೂ ಒಂದು ಪ್ರತಿಭಟನೆ ಎಂದು ಈ ಮಾಧ್ಯಮಗಳಿಗೆ,ಸರಕಾರಕ್ಕೆ ಅನಿಸುವುದೂ ಇಲ್ಲ.

ಇಂತಹ ಹೊತ್ತಲ್ಲೇ ಜನಗಳ ತೆರಿಗೆಯ ಹಣದಲ್ಲಿ ನಡೆವ ಅನಗತ್ಯ "ಉಪ ಚುನಾವಣೆ" ಬಂದಿದೆ. ನಿಲ್ಲುವವರು ಟಿಕೆಟ್ಟುಗಳಿಗೆ ಓಡಾಡುತ್ತಲಿದ್ದಾರೆ.ಟಿಕೆಟ್ ಸಿಕ್ಕವರು ಮತ್ತೆ ಹಳ್ಳಿಗಳಿಗೆ ಹೋಗಿ 'ನಿಮ್ಮೂರಿಗೆ ಭದ್ರಾ ನದಿ ನೀರು ತರುತ್ತೇವೆ,ನಮಗೇ ಓಟು ಹಾಕಿ' ಎಂಬ ಶಾಶ್ವತ ಭರವಸೆ ಕೊಡುವ ಹವಣಿಕೆಯಲ್ಲಿದ್ದಾರೆ.

ಸಾವು ಮಾತ್ರ ರೈತನ ತಲೆಬಾಗಿಲಲ್ಲಿ ಕುಳಿತು ಕಾಯುತ್ತದೆ.



ದನಕರುಗಳಿಗೆ ಹುಲ್ಲಿಲ್ಲ ಕಾಡಲ್ಲಿ! ನೀವೇ ನೋಡಿ ಇಲ್ಲಿ!

ಕಮರಿದ್ದು ಬೆಳೆಯಲ್ಲ...ಬದುಕಿನ ಕನಸು!

ಒಣಗಿ ನಿಂತ ಮೆಕ್ಕೆಜೋಳದ ಇನ್ನೊಂದು ಹೊಲದ ಚಿತ್ರ.

ಮಳೆ ಕಾಣದೆ ತೆನೆ ಇಲ್ಲದೆ‌ ಒಣಗಿದ ಮೆಕ್ಕೆ ಜೋಳ.

ಸಂಪೂರ್ಣ ಒಣಗಿ ನಿಂತಿದೆ ರಾಗಿ.

ಮಳೆ ಇಲ್ಲದೆ ಒಣಗಿದ ನೆಲಗಡಲೆ ಬೆಳೆ.

Monday, 2 July 2018

ಹುಚ್ಚು ಖೋಡಿ ಮನಸು - ೧೨

ನಾನು ಬರೆದದ್ದನ್ನು ಓದುವ ಜೀವ ಜೀವಾಳವೇ...
ನಮ್ಮ ಮಧ್ಯೆ ಹರಿದಾಡಿದ ಅಕ್ಷರಗಳ ಲೆಕ್ಕ
ನಿನ್ನ ಮೌನಕ್ಕೂ ಹಾಕಿಟ್ಟಿದ್ದೇನೆ ಬಿಡು ತೂಕ!
ಎಷ್ಟು ಸಲ ತುಟಿ ಕಚ್ಚಿ ತಡೆದಿದ್ದೆ ಹೇಳು ಬಿಕ್ಕ?
ಕೊಂದಿದ್ದ ಕಾಲವೆಷ್ಟು? ಹೇಳಲಿಲ್ಲ ಯಾಕ?

ಸಾವಿಗೂ ಸಮಾಧಾನ ಮಾಡುತ್ತಿದ್ದೆ
ಕತ್ತಲನ್ನೂ ಬಿಡದೆ ಹತ್ತಿರ ಕರೆಯುತ್ತಿದ್ದೆ
ಕಾರಣಗಳೇ ಇಲ್ಲದೆ ನಕ್ಕಿದ್ದಕ್ಕೆ
ದಾರುಣವಾಗಿ ಬಿಕ್ಕಿ ಅತ್ತಿದ್ದಕ್ಕೆ
ಕಂದಾಯ ಕಟ್ಟಲೇಬೇಕಿದೆಯಲ್ಲವೇ ಕಾಲಕ್ಕೆ?

ಈಗಲೂ ಬೀಳುತ್ತವೆ ಬಿಡು,
ರಾತ್ರಿ ಮಲಗಿದಾಗ ಕೆಲ ಅರ್ಥವಾಗದ ಕನಸು!
ಆಗಾಗ ಕಳಿಸುತ್ತಿರುತ್ತೇನೆ ಹೀಗೆ
ತೆರೆದು ನೋಡು ನಿನ್ನ ಹುಚ್ಚು ಖೋಡಿ ಮನಸು!

Thursday, 14 June 2018

....ನಾ ಆಗಿದ್ದಿದ್ದರೆ..,

ನಾ ನಗುವಾಗಿದ್ದರೆ
ನಿನ್ನ ತುಟಿಯಲಿರುತ್ತಿದ್ದೆ
ನಾ ಮಗುವಾಗಿದ್ದರೆ
ನಿನ್ನ ಮಡಿಲಲಿರುತ್ತಿದ್ದೆ
ನಾ ನೆಲವಾಗಿದ್ದರೆ
ನಿನ್ನ ಹೆಜ್ಜೆಗೆ ಗುರುತಾಗುತಿದ್ದೆ
ನಾ ಮಳೆಯಾಗಿದ್ದರೆ
ನಿನ್ನ ನೆನೆಸಿ ಆಡುತ್ತಿದ್ದೆ
ನಾ ಗಾಳಿಯಾಗಿದ್ದರೆ
ನಿನ್ನ ಸೆರಗ ಸೇರುತಲಿದ್ದೆ
ನಾ ಬೆಂಕಿಯಾಗಿದ್ದರೆ
ನಿನ್ನ ಕೈಯ ದೀಪವಾಗುತಿದ್ದೆ
ನಾ ಬದುಕಾಗಿದ್ದರೆ
ನಿನ್ನ ಆಯುಷ್ಯವಾಗುತಿದ್ದೆ

ನಾ ಸಾವಾಗಿದ್ದರೆ ನಿನಗೆ
ಪ್ರಾಣವನ್ನಿತ್ತು ತೆರಳುತ್ತಿದ್ದೆ



Friday, 8 June 2018

ವಿದಾಯಕ್ಕೊಂದು ಕವಿತೆ....

ನೀನು ಈಗ ಗೂಡು ಕಟ್ಟಿಕೊಂಡ ತಾಯಿಗುಬ್ಬಿ
ನಾನೋ...ಸೂತ್ರ ಕಿತ್ತ ಗಾಳಿಪಟದ ಪ್ರೇತರೂಪ
ಹೀಗೇ ಯಾವಗಲಾದರೊಮ್ಮೆ,
ಮಳೆಯಲ್ಲಿ ನೆಂದು ನಡುಗುವಾಗಲೆಲ್ಲ
ನಿನ್ನ ನೆನಪಾಗುತ್ತದೆ..
ಅಲ್ಲೇ ಬೋಳುಮರದ ಮೇಲೆ
ಕುಳಿತ ಕುಂಟಗುಬ್ಬಿಯ ಜೊತೆಗೆ
ಮಾತನಾಡಿಕೊಳ್ಳುತ್ತೇನೆ.....

ನೀನು ಕೊಟ್ಟ ವಿರಹದ ನೋವಿಗಿಂತಲೂ
ನಾವಿಬ್ಬರೂ ಜೊತೆಗಿದ್ದ ಕ್ಷಣ ನೆನಪಾಗುತ್ತಿದೆ.
ಸ್ವಲ್ಪ ಕಣ್ಣೀರು,ಬೀಸಿದ ಗಾಳಿಗೋ
ಅಥವ ನಿಟ್ಟುಸಿರಿಗೋ ಇಳಿವ ಮುನ್ನವೇ ಆವಿ!
ಹೌದು...
ನೀನು ಕೊಟ್ಟು ಹೋದ
ನೋವಿನ ಸಾಲವನ್ನು
ನಾ ಬರೆದ ಸಾಲುಗಳಿಂದಲೇ
ತೀರಿಸುವ ವ್ಯರ್ಥ ಪ್ರಯತ್ನ ನನ್ನದು..

ನಾ ಬರೆದ ಸಾಲುಗಳಲ್ಲಿ
ಮೊದಲ ಪ್ರೀತಿಯ ಸೋಲಿದೆ.

ಪ್ರೀತಿಸಿದ ಹೃದಯದ ಸಾವಿದೆ.
ಹರಿಸಿದ ಕಣ್ಣೀರ ಹನಿಗಳನು
ನೆನಪಿನ ಲೇಖನಿಯೊಳಗೆ ಸೇರಿಸಿ
ಬಾಳಪುಸ್ತಕದಲ್ಲಿ ಬರೆದ ಸಾಲುಗಳಿವು.
ಅಲ್ಲಲ್ಲಿ ಅಕ್ಷರಗಳು
ಸ್ಪಷ್ಟವಾಗಿ ಕಾಣದಿದ್ದರೆ ಕ್ಷಮಿಸಬಿಡು..
ಯಾಕೆಂದರೆ,ನನಗೂ ವಯಸ್ಸಾಯಿತು ನೋಡು!
ಆ ಅಕ್ಷರದೊಳಗೆ ನನ್ನ
ಕಣ್ಣೀರೂ ಜಾಸ್ತಿಯೇ ಹರಿದಿರಬಹುದು.
ಮುಗಿಯದ ಈ ಬಾಳಪುಸ್ತಕದಲ್ಲಿ
ಕಣ್ಣೀರು ಮುಗಿಯುವರೆಗೆ ಬರೆಯುತ್ತೇನೆ.
ಬರವಣಿಗೆಯಿಂದ ಬರೀ ನಿನ್ನ
ನೆನಪಿನ ಮೆರವಣಿಗೆ ಮಾಡಿದ ನಾನು
ನನ್ನಲ್ಲಿ ಬದಲಾವಣೆ ತಂದು
“ಕವಿ ಕಾಣದನ್ನೂ ಕಂಡು ”
ಕವಿಯಾಗಿ ಬರೆಯುತ್ತೇನೆ !




Thursday, 7 June 2018

ಹುಚ್ಚು ಖೋಡಿ ಮನಸು - ೧೦

ಏಕಾಂತದ ಗುಡಿ ಕಟ್ಟಿದ್ದೆ
ಮೌನದ ಕಲಶವಿಟ್ಟಿದ್ದೆ
ಅಂತರಂಗದ ಗರ್ಭಗುಡಿಯಲ್ಲಿ
ನಿನ್ನದೇ ಮಾನಸ ಪೂಜೆ!!
ಕನಸು ಹೂವುಗಳೇ- ನಿನಗೆ ಬಕುಲ ಮಾಲೆ!
ಕಾಲವೂ ಮರೆತಿತ್ತು - ಇಂದು ಮತ್ತು ನಾಳೆ!
ಆದರೂ ಏಕಿತ್ತು ನಿನಗೆ ಅಷ್ಟೊಂದು ಮುನಿಸು?
ಕೇಳಿತ್ತು ನೋಡು ಈ ಹುಚ್ಚು ಖೋಡಿ ಮನಸು!!

"ಹಿ.ಮ.ನಾ. ರವರ ಬಗ್ಗೆ.

 ಕವಿ, ಪತ್ರಕರ್ತ, ಸಮಾಜಸೇವಕ, ಸ್ವಾತಂತ್ರ್ಯ ಹೋರಾಟಗಾರ ಹಿ.ಮ. ನಾಗಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹೊಸಹಳ್ಳಿ ಹೋಬಳಿಗೆ ಸೇರಿದ ಹಿರೇಕುಂಬ...