Sunday 17 May 2020

ಕ್ವೇರಂಟೀನ್ ಕವಿತೆಗಳು -೧


ಗುಡುಗು,ಮಿಂಚು,ಸಿಡಿಲ ಮೇಳದ
ಭವ್ಯ ಮೆರವಣಿಗೆಯಲ್ಲಿ ನಿನ್ನೆ ನನ್ನೂರಿಗೆ ಬಂದ,
ಆ ಕುಂಭದ್ರೋಣದ ಮುಂಗಾರಿನ ಮಳೆಗೆ
ಲಾಕ್ ಡೌನ್ ಹಾಕಲಾದೀತೇನು?
ಮೊದಲ ಮಳೆ ಸ್ಪರ್ಶಕೆ ಘಮ್ಮನೆ ಹೊಮ್ಮುವ
ಮಣ್ಣವಾಸನೆಗೆ ಕ್ವಾರಂಟೀನ್ ಮಾಡುವಿರೇನು?

ಮಳೆಗೇ ಕಾದಿದ್ದು, ಬಂದೊಡನೇ ಪುತಪುತನೇ
ಟಿಸಿಲೊಡೆದು ಚಿಗುರಿ ಹಬ್ಬುವ ಲಕ್ಷ ಅಕ್ಷಯ
ಸಸ್ಯರಾಶಿಗೆ ಅದ್ಯಾವ ಸಾಮಾಜಿಕ ಅಂತರವಿತ್ತು?
ಅರೇ..ಆ ಹೆಜ್ಜೇನು ಹೊಟ್ಟಿನದ್ಯಾವ ಅಂತರ?
ಬಣ್ಣಬಣ್ಣದ ಕೀಟರಾಶಿಗೆ,ಪತಂಗ ಸಹಸ್ರಕ್ಕೆ..
ನಾಕಾಬಂದಿ ಹಾಕಿ, ತಡೆಯಬಲ್ಲಿರೇನು?

ಮಾವಿನ ಚಿಗುರು ಮೆದ್ದ ಕೋಗಿಲೆಯ ಇನಿದನಿಯ
ಅರಳಿದ ಹೂ ಮೇಲೆ ಪಟಪನೆ ಹಾರುವ ದುಂಬಿಯ
ಚಿಗುರು ಹುಲ್ಲನರಸಿ ಎಲ್ಲಿಂದಲೋ ಬಂದ ಮೊಲವ
ಹಿಡಿದು ಮುಂಗೈಗೆ ಸೀಲು ಹಾಕುವಿರೇನು?

ಈ ಕರೊನ ಬಂದದ್ದು ಪ್ರಕೃತಿಗಲ್ಲ, ಪ್ರಕೃತಿಯಿಂದಲೂ ಅಲ್ಲ.
ಮಾನವ ವಿಕೃತಿಗೆ, ಧರ್ಮ-ಜಾತಿಗೆ,ಮತ್ತು ಅರಿವೆಂಬ ಅಜ್ಞಾನಕ್ಕೆ!! 

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...