Thursday 7 January 2021

ಹೊರಗೆ ಹೋಗಬೇಡ ...ಅಪ್ಪಿ ತಪ್ಪಿಯೂ...


ಬಾಯಿತುಂಬಾ ನಕ್ಕು ಹಗುರಾಗದೆ
ಅದೆಷ್ಟು ದಿನಗಳಾದವು ಬದುಕೇ...
ತಮಾಷೆಗೂ ನಗಿಸಲಿಲ್ಲ ಯಾರನ್ನೂ
ಕಾಲದ ಬಗೆಗೊಂದು ನನ್ನ  ತಕರಾರಿದ್ದೇ ಇದೆ!
ಹೆಜ್ಜೆ ಮೂಡಿಸದ ನನ್ನ ದಾರಿಯಲ್ಲಿ 
ಅದೆಷ್ಟೋ ಕನಸುಗಳ ಹೂ ಅರಳಿ ಬಾಡಿದ್ದವಲ್ಲವೇ?
ಬದುಕಿನ ಸುಂಕ ಕಟ್ಟಿದ್ದವನಿಗೆ
ಸಾವು ಮುಫತ್ತಾಗಬೇಕಿತ್ತು...ದುಬಾರಿಯಾಗಿದೆ!
ಬದುಕಿನ ಹಾಳೆ ಹರಿದು ಹಾಕಿದವನಿಗೆ
ಬದಲಾಗುವ ತಾರೀಖುಗಳ ಬಗೆಗೆ
ಎಂದಿಗೂ ಕುತೂಹಲವಿರಲಿಲ್ಲ..ಇಂದಿಗೂ!!
ಇರುಳ ಬೆರಳಿಗೆ ನಿನ್ನ ನೆನಪಿನುಂಗುರವಿಟ್ಟರೆ
ಅದೆಲ್ಲಿಯದೋ ಒಂದು ಬೆಳಕು ಬರುತ್ತದೆ..
ಅಷ್ಟು ಸಾಕೆನಿಸಿಬಿಡುತ್ತದೆ..ಉಂಡು ಮಲಗಲು!
ನಮ್ಮೊಳಗಷ್ಟೇ ಅನಂತದ ನಿರಂತರ ಬಯಲು..
ಹೊರಗೆ ಹೋಗಬೇಡ..ಅಪ್ಪಿತಪ್ಪಿಯೂ ಕೂಡ!
ಅಲ್ಲಿ ಹೆಜ್ಜೆಗೊಂದೊಂದು ಗೋಡೆ..ಪ್ರಶ್ನೆಗಳ ಬಂಧ!!
ಹೀಗೇ ಇದ್ದುಬಿಡುವ.. ಕಾಲ ಕರೆವತನಕ!!

No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...