Friday 4 March 2022

ಶಿವನೆಂದರೆ...


 ಎಲ್ಲವನ್ನೂ ಸೀಟಿ ಬಳಿದಾಗ ಉಳಿವ ನಿಃಶ್ಶೇಷವೇ "ಶಿವ"!

ಸರ್ವವೂ ಸುಟ್ಟು ಕರಕಲಾಗಿ ಉಳಿದ ಬೂದಿ, ಈ " ಶಿವ"!

ಶಿವನೆಂದರೆ ಸ್ಮಶಾನ...ಅವನೇ ಕಾಲಭೈರವ!

ಶಿವನೆಂದರೆ ಮರಣ...ಅವನೇ ನಿಯಾಮಕ!

ಶಿವನೆಂದರೆ ಪ್ರಳಯ...ಅವನೇ ಮಹಾರುದ್ರ!

ಅಹಂಕಾರದಲ್ಲಿ ಶಿವನಿಲ್ಲ...ಆಕಾರದಲ್ಲಿ ಅವನಿಲ್ಲ!

ಶಿವನೆಂದರೆ, ಸುರತ-ವಿರತ ನಿಸ್ಸಂಗತ್ವ!

ಶಿವನೆಂದರೆ ವಿರಕ್ತಿಯ ಪರಕಾಷ್ಠೆ..ವಿಯೋಗದ ಅಂತ್ಯಬಿಂದು!

ಶಿವನೆಂದರೆ ಪೂರ್ಣ ಶೂನ್ಯ...ಏನೂ ಇಲ್ಲದ ಅನಂತ ಬಯಲು!

ಶಿವ, ಸಂಸಾರಿಯಾಗಿಯೂ ವೈರಾಗ್ಯ ಯೋಗೇಶ್ವರ!

ಮಕ್ಕಳಿದ್ದೂ ಲೌಕಿಕದೆಡೆ ಕಣ್ಣೆತ್ತಿಯೂ ನೋಡದ ವಿಷಣ್ಣ!

ಅರೇ..ಶಿವನೆಂದರೆ ಬೇರೇನಲ್ಲ!

ಶಿವನೆಂದರೆ, ನೀವು ಮತ್ತು ನಾನು,ಎಲ್ಲರೂ!


ಜಗಜ್ಯೋತಿ ಬಸವಣ್ಣನ ಪ್ರಣೀತ ಲಿಂಗಾಯತ ಚಿಂತನೆಯ ಮೂಲವು ಆಗಮಜನ್ಯವಾದ ಶೈವ ಪರಂಪರೆಯದ್ದು! ಆಗಿನ ಶೈವವು ಜನಸಾಮಾನ್ಯರ ನಿಲುಕಿಗೆ ದಕ್ಕದೆ ದಸ್ಯುಗಳಲ್ಲಿ , ಪೈಶಾಚಿಕ ರೀತಿಯಲ್ಲಿ ಆಚರಣೆಯಲ್ಲಿತ್ತು.

           ಶೈವದಲ್ಲಿ ನಾಥ ಪರಂಪರೆ ಬಹುಜನಪ್ರಿಯ.ಅಲ್ಲಮನು ಅಲ್ಲಿದ್ದವನೇ. ಅಘೋರ,ಕಾಪಾಲಿಕ,ಚಾಂಡಾಲ,ವಿವಂಶಕ..ಮುಂತಾದ ಕವಲುಗಳಾಗಿ ಹಂಚಿದ್ದ ಇದನ್ನು ಬಸವಣ್ಣ ಗಮನಿಸಿ, 28 ಶಿವಾಗಮಗಳ ಆಧಾರದಲ್ಲಿ "ವೀರಶೈವ" ವನ್ನು ಕಟ್ಟಿದ. ಇದು 'ವಿಶಿಷ್ಟಾದ್ವೈತ' ಚಿಂತನೆಯಾಗಿ,ಆಗಮಗಳು ವಚನಗಳಾಗಿ ಸಾಮಾನ್ಯ ಜನಕ್ಕೆ ಎಟುಕಿದವು.

             ಇವತ್ತಿಗೂ ನಾಥ ಪರಂಪರೆಯ ಸಾಧುಗಳಿದ್ದಾರೆ.ಅಘೋರಿಗಳು,ಕಾಪಾಲಿಕರು,ನಾಗಾ ಸಾಧುಗಳು ಆಗಮ ರೀತಿಯಲ್ಲೇ ಶವ ಭೋಜನ,ಶವಸಂಭೋಗ,ನಿರ್ವಸನ,ನಿರ್ವಿಕಾರ ಆಚರಣೆಗಳಲ್ಲಿ ಶಿವನನ್ನು ಪೂಜಿಸುತ್ತಾರೆ. 

           'ಶಿವ'-ಎಂಬ ವ್ಯಕ್ತಿತ್ವವು ಮುಂದೆ ಚಾರ್ವಾಕ,ಸಾಂಖ್ಯ ಚಿಂತನೆಗಳ ಮೂಲದ್ರವ್ಯವಾಯಿತು. ಬೌದ್ಧ ದರ್ಮದ ಉಗಮಕ್ಕೆ ಕಾರಣವೂ ಆಯಿತು.

ಹಾಗಾಗಿ, ಶಿವ - ಬರೀ ಭಾವುಕ ಜಗತ್ತಿನ ಕಲ್ಪನೆಯಲ್ಲ.ಮೂಢ ನಂಬಿಕೆಯೂ ಇಲ್ಲ. ಪುರಾಣ-ಕಥೆಗಳ ಪಾತ್ರವಂತೂ ಅಲ್ಲವೇ ಅಲ್ಲ. ಶಿವ - ಆದಿಮ ಸಂಸ್ಕೃತಿಯ ಬೇರು. ಅಸಂಖ್ಯವಾದ ತಳವರ್ಗದ ಜನರ ಉಸಿರು. ಬಡವರ ಆಸರೆ.

             


No comments:

Post a Comment

ಜನ-ಜಾಣತನ

 "ಅಣ್ಣಾ ಜಗಳೂರು ಬಸ್ ಹೋಯ್ತಾ?"-ಯಾರೋ ಕೇಳತಾರೆ. ಕೇಳಿಸಿಕೊಂಡ ಅಂಗಡಿಯವ, ಗೊತ್ತಿದ್ದರೂ ಹೇಳಲ್ಲ.ನಾನ್ಯಾಕೆ ಪುಕ್ಸಟ್ಟೆ ಹೇಳಲಿ ಎಂಬ ಸಣ್ಣತನ. ಅವನ‌ ಅಂಗಡಿಯಲ...